CRIME & LEGAL NEWS: “ಬೆಂಗಳೂರು| ಪೋಕ್ಸೋ ಪ್ರಕರಣ: ಮಾಜಿ ಸಿ.ಎಂ. ಬಿ.ಎಸ್‌. ಯಡಿಯೂರಪ್ಪ ಸೇರಿ ನಾಲ್ವರಿಗೆ ನ್ಯಾಯಾಲಯದಿಂದ ಸಮನ್ಸ್ ಜಾರಿ.!”

By admin

“ಬೆಂಗಳೂರು|ಪೋಕ್ಸೋ ಪ್ರಕರಣ:  ಮಾಜಿ ಸಿ.ಎಂ.ಬಿ.ಎಸ್‌. ಯಡಿಯೂರಪ್ಪ ಸೇರಿ ನಾಲ್ವರಿಗೆ ನ್ಯಾಯಾಲಯದಿಂದ ಸಮನ್ಸ್ ಜಾರಿ.!

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್:‌ 

ಬೆಂಗಳೂರು: ಬಹುಚರ್ಚಿತ ಪೋಕ್ಸೋ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಮೂವರಿಗೆ ಬೆಂಗಳೂರಿನ ವಿಶೇಷ ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಮಂಗಳವಾರ ನಡೆದ ವಿಚಾರಣೆಯಲ್ಲಿ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ಎನ್. ನಾಯಕ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಎಫ್‌ಟಿಎಸ್ ವಿಶೇಷ ಕೋರ್ಟ್-1ರ ನ್ಯಾಯಾಧೀಶೆ ಸುಜಾತಾ ಅವರು, ಯಡಿಯೂರಪ್ಪ, ಎಂ. ರುದ್ರೇಶ, ವೈ.ಎಂ. ಅರುಣ ಹಾಗೂ ಜಿ. ಮರಿಸ್ವಾಮಿ ಅವರಿಗೆ ಡಿ. 2ರಂದು ಕೋರ್ಟ್‌ಗೆ ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದರು.

• 30 ದಿನಗಳಲ್ಲಿ ಸಾಕ್ಷಿ ವಿಚಾರಣೆ ಪೂರ್ಣಗೊಳ್ಳಬೇಕು:

ಪ್ರಕರಣದ ಸ್ವಭಾವ ಹಾಗೂ ಕಾನೂನು ಪ್ರಕ್ರಿಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, 30 ದಿನಗಳ ಒಳಗಾಗಿ ಸಾಕ್ಷಿ ವಿಚಾರಣೆಯನ್ನು ಅಂತಿಮಗೊಳಿಸಬೇಕು ಎಂಬ ಕಾರಣಕ್ಕೆ ಸಮನ್ಸ್ ಜಾರಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ.

• ಹೈಕೋರ್ಟ್ ಮನವಿ ತಿರಸ್ಕಾರ:

ಈ ನಡುವೆ, ವಿಚಾರಣೆಯಿಂದ ಹೊರಬರಲು ಯತ್ನಿಸಿದ ಎಂ. ರುದ್ರೇಶ, ವೈ.ಎಂ. ಅರುಣ ಹಾಗೂ ಜಿ. ಮರಿಸ್ವಾಮಿ ಸಲ್ಲಿಸಿದ್ದ ಎರಡು ಎರಡು ರಿಟ್ ಅರ್ಜಿಗಳನ್ನು ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು.

ಆರೋಪಿಗಳು ಸಲ್ಲಿಸಿದ್ದ ಮನವಿಯಲ್ಲಿ, “ಯಡಿಯೂರಪ್ಪ ಅವರ ಹಾಜರಾತಿ ಅಗತ್ಯವಿಲ್ಲವೆಂದು ಕಂಡುಕೊಂಡರೆ, ಅವರನ್ನು ಹಾಜರಾಗುವಂತೆ ಬಲವಂತಪಡಿಸಬಾರದು. ವಿಚಾರಣಾ ನ್ಯಾಯಾಲಯವು ಮೇಲ್ಮನವಿ ನ್ಯಾಯಾಲಯಗಳ ಟಿಪ್ಪಣಿಗಳ ಪ್ರಭಾವಕ್ಕೊಳಗಾಗದೇ, ತನ್ನ ಮುಂದೆ ಇರುವ ಸಾಕ್ಷಿಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು” ಎಂದು ಬೇಡಿಸಿದ್ದರು.

ಈ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠ, ವಿಚಾರಣಾ ನ್ಯಾಯಾಲಯಕ್ಕೆ “ಸ್ವತಂತ್ರವಾಗಿ, ಕಾನೂನುಬದ್ಧವಾಗಿ ಪ್ರಕರಣದ ನಿರ್ಣಯ ಕೈಗೊಳ್ಳಬೇಕು” ಎಂದು ಸ್ಪಷ್ಟ ನಿರ್ದೇಶ ನೀಡಿತ್ತು.

• ಮುಂದಿನ ಹಂತ : 

ಈಗ ಸಮನ್ಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಡಿಸೆಂಬರ್ 2ರಂದು ಆರೋಪಿಗಳ ಹಾಜರಾತಿ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಡೆಯುವ ಮುಂದಿನ ಬೆಳವಣಿಗೆಗಳತ್ತ ಎಲ್ಲರ ದೃಷ್ಟಿ ನೆಟ್ಟಿದೆ.