🛕JATRA BIGG NEWS : “ಕೊಪ್ಪಳ| ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ :  ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ ಇಂದು!!

By admin

  🛕JATRA BIGG NEWS : “ಕೊಪ್ಪಳ| ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ :  ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ ಇಂದು!!

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ದಕ್ಷಿಣ ಭಾರತದ ಮಹಾಕುಂಭಮೇಳವೆಂದೇ ಖ್ಯಾತಿ ಪಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮವಾದ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಜ.5ರಂದು ಸಂಜೆ 5.30 ಗಂಟೆಗೆ ನಡೆಯಲಿರುವ ಮಹಾರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲ ಹಾಗೂ ಕುಕನೂರು ಮೂಲದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಲಿದ್ದಾರೆ.

ಪ್ರತಿ ವರ್ಷವೂ ಒಬ್ಬ ಸಾಧಕರನ್ನು ಆಹ್ವಾನಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡುವ ಪರಂಪರೆಯಂತೆ, ಈ ವರ್ಷ ವಿಜಯಶಂಕರ್ ಅವರಿಗೆ ಗೌರವ ಸಲ್ಲಿಸಲಾಗಿದೆ. ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಭಕ್ತರ ಸುರಕ್ಷತೆ, ದರ್ಶನ ವ್ಯವಸ್ಥೆ, ವಾಹನ ಸಂಚಾರ ಹಾಗೂ ಮೂಲಸೌಕರ್ಯಗಳ ಸೇರಿದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಶ್ರೀ ಗವಿಮಠ ಪೂರ್ಣಗೊಳಿಸಿದೆ.

ಮಹಾರಥೋತ್ಸವದ ನಂತರ ಶ್ರೀಮಠದ ಕೈಲಾಸ ಮಂಟಪದಲ್ಲಿ ಭಕ್ತ ಹಿತಚಿಂತನ ಸಭೆ ಸೇರಿದಂತೆ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ವಿದ್ವಾನ್ ನೌಶಾದ್ ಹರ್ಲಾಪುರ ಹಾಗೂ ನಿಶಾದ್ ಹರ್ಲಾಪುರ ಅವರ ಸಂಗೀತ ಕಾರ್ಯಕ್ರಮ, ಗಂಗಾವತಿಯ ನರಸಿಂಹ ಜೋಷಿ ಅವರ ಹಾಸ್ಯ ಕಾರ್ಯಕ್ರಮ ಜರುಗಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿದಂತೆ ಭಕ್ತರು ಸ್ವಯಂಸೇವಕರಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ರೀತಿಯ ಅಡಿಗೆಗಳನ್ನು ತಯಾರಿಸುವ ಮೂಲಕ ಹೆಸರು–ಖ್ಯಾತಿ ಪಡೆದಿರುವ ಮಹಾ ದಾಸೋಹ ಈಗಾಗಲೇ ಜ.1ರಿಂದ ಆರಂಭಗೊಂಡಿದ್ದು, ಭಕ್ತರಿಗೆ ಪ್ರಸಾದ ಸವಿಯಲು ಅವಕಾಶ ಕಲ್ಪಿಸಲಾಗಿದೆ. ಈ ಮಹಾ ದಾಸೋಹವು ನಿರಂತರವಾಗಿ 15 ದಿನಗಳ ಕಾಲ ನಡೆಯಲಿದೆ.

ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸಲಾಗುತ್ತಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಗವಿಸಿದ್ದೇಶ್ವರರ ದಿವ್ಯ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಸದ್ಭಕ್ತ ಮಂಡಳಿ ಹಾಗೂ ಗವಿಮಠ ಮೂಲಗಳು ಮನವಿ ಮಾಡಿದೆ.