“ಕಾರಟಗಿ| ಕೆಪಿಎಸ್ ವಿಲೀನದ ಹುನ್ನಾರಕ್ಕೆ ಎಸ್ಎಫ್ಐ ಪ್ರತಿಭಟನೆ ; ‘ಶಾಲೆ ಮುಚ್ಚಿದರೆ ವಿಧಾನಸೌಧ ಮುತ್ತಿಗೆ’ ಎಚ್ಚರಿಕೆ”

Contents
“ಕಾರಟಗಿ| ಕೆಪಿಎಸ್ ವಿಲೀನದ ಹುನ್ನಾರಕ್ಕೆ ಎಸ್ಎಫ್ಐ ಪ್ರತಿಭಟನೆ ; ‘ಶಾಲೆ ಮುಚ್ಚಿದರೆ ವಿಧಾನಸೌಧ ಮುತ್ತಿಗೆ’ ಎಚ್ಚರಿಕೆ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಕಾರಟಗಿ: 700 ಕೆಪಿಎಸ್ ಹೆಸರಿನಲ್ಲಿ 5,000ಕ್ಕೂ ಹೆಚ್ಚು ಸರ್ಕಾರಿ ಶಾಲೆ–ಪಿಯು ಕಾಲೇಜುಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮವನ್ನು ಖಂಡಿಸಿ ಕಾರಟಗಿಯ ಕನಕದಾಸ ವೃತ್ತದಲ್ಲಿ ಸೋಮವಾರ ಎಸ್ಎಫ್ಐ ಪ್ರತಿಭಟನೆ ನಡೆಸಿ ,ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶರೀಫ್ ಎಂ.ಪಿ ಅವರು ಮಾತನಾಡಿ, “ಪ್ರಸ್ತುತ ರಾಜ್ಯದಲ್ಲೇ 47,493 ಸರ್ಕಾರಿ ಶಿಕ್ಷಣ ಸಂಸ್ಥೆಗಳಿದ್ದು, ದಾಖಲೆ ಆಧಾರದ ಮೇಲೆ ಸರ್ಕಾರ ಕ್ರಮೇಣ ಸರ್ಕಾರಿ ಶಾಲೆಗಳನ್ನೇ ದುರ್ಬಲಗೊಳಿಸುತ್ತಿದೆ” ಎಂದು ಆರೋಪಿಸಿದರು.2015-16ರಲ್ಲಿ ಸರ್ಕಾರಿ ಶಾಲೆಗಳಲ್ಲಿ 47.1 ಲಕ್ಷ ವಿದ್ಯಾರ್ಥಿಗಳಿದ್ದರೆ, 2025-26ರಲ್ಲಿ 38.2 ಲಕ್ಷಕ್ಕೆ ಕುಸಿದಿರುವುದು 19% ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳ ಪಾಲು 46%ರಿಂದ 38%ಕ್ಕೆ ಇಳಿದಾಗ, ಖಾಸಗಿ ಅನುದಾನರಹಿತ ಶಾಲೆಗಳು 36.3 ಲಕ್ಷದಿಂದ 47 ಲಕ್ಷಕ್ಕೆ 29% ಹೆಚ್ಚಳ ಕಂಡಿವೆ. “ಸರ್ಕಾರವೇ ಸೌಲಭ್ಯ, ಶಿಕ್ಷಕರು, ಪಠ್ಯಪುಸ್ತಕ, ಸೈಕಲ್ ಯೋಜನೆ ನೀಡದೆ ದಾಖಲಾತಿ ಕಡಿಮೆಯಾದ ನೆಪದಲ್ಲಿ ಶಾಲೆ ಮುಚ್ಚುತ್ತಿರುವುದು ಶಿಕ್ಷಣ ವಿರೋಧಿ” ಎಂದು ಎಸ್ಎಫ್ಐ ಆರೋಪಿಸಿದೆ.CSR ಅಡಿಯಲ್ಲಿ ತೆರೆಯುವ ಕೆಪಿಎಸ್ ಶಾಲೆಗಳಿಗೆ ಮೂಲಸೌಕರ್ಯ ನಿರ್ಮಾಣದಿಂದ ಹಿಡಿದು ಅತಿಥಿ ಶಿಕ್ಷಕರ ಸಂಬಳದವರೆಗೂ ದಾನಿಗಳು–ಸಂಸ್ಥೆಗಳೇ ಸಂಪೂರ್ಣ ಹೊಣೆ, ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಇಲ್ಲ ಎಂಬ ಸುತ್ತೋಲೆ ಸರ್ಕಾರ ಖಾಸಗೀಕರಣಕ್ಕೆ ಬಾಗಿಲು ತೆರೆದಿರುವುದಕ್ಕೆ ಸಾಕ್ಷಿ ಎಂದು ಸಂಘಟನೆ ತಿಳಿಸಿದೆ. “ಕೆಪಿಎಸ್ ಹೆಸರಿನಲ್ಲಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದೂ, ಸಂಸ್ಥೆಗೆ ಶಾಲೆಗೆ ತಮಗಿಷ್ಟದ ಹೆಸರು ಇಡುವ ಅವಕಾಶ ಕಲ್ಪಿಸುವುದೂ ಸಾರ್ವಜನಿಕ ಶಿಕ್ಷಣವನ್ನು ಅಪಾಯಕ್ಕೆ ತಳ್ಳುವ ಕ್ರಮ” ಎಂದರು.“ಹಳ್ಳಿಗಳ ಸರ್ಕಾರಿ ಶಾಲೆ–ಪಿಯು ಕಾಲೇಜುಗಳನ್ನು ವಿಲೀನಗೊಳಿಸುವ ಯತ್ನ ತಕ್ಷಣ ನಿಲ್ಲಿಸಬೇಕು, ರಾಜ್ಯದ ಖಾಲಿ ಇರುವ 59,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು, ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ” ಎಂದು ಎಸ್ಎಫ್ಐ ಎಚ್ಚರಿಸಿದೆ.ಪ್ರತಿಭಟನೆಯಲ್ಲಿ ಮುಖಂಡರು ರವಿ, ಪರಮೇಶ್, ಪಲ್ಲವಿ ಎಚ್, ಕರಿಯಮ್ಮ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು.
