“ಕನಕಗಿರಿ|ಹಜರತ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆ : ನಿಜವಾದ ಇತಿಹಾಸ ತಿಳಿದುಕೊಳ್ಳುವಂತೆ ನೀಲಕಂಠ ಬಡಿಗೇರ ಕರೆ”
• ಸ್ವಾತಂತ್ರ್ಯ ಹೋರಾಟ, ಭಾವೈಕ್ಯತೆ–ಅಭಿವೃದ್ಧಿಯನ್ನು ನೆನಪಿಸಿದ ವಕ್ತಾರರು
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕನಕಗಿರಿ :
ಪಟ್ಟಣದ ಟಿಪ್ಪುಸುಲ್ತಾನ್ ವೃತ್ತದಲ್ಲಿ ಹಜರತ್ ಟಿಪ್ಪುಸುಲ್ತಾನ್ ಯುವಕ ಸಂಘದ ವತಿಯಿಂದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಮುಖಂಡ ನೀಲಕಂಠ ಬಡಿಗೇರ , “ಮೈಸೂರಿನ ಹುಲಿ ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ದಿಟ್ಟವಾಗಿ ಹೋರಾಡಿದ ಸ್ವಾತಂತ್ರ್ಯ ಸೇನಾನಿ. ಗುಲಾಮಗಿರಿ ಒಪ್ಪದೇ ರಣರಂಗದಲ್ಲಿ ಹುತಾತ್ಮರಾದವರು. ಕೃಷಿ ಸುಧಾರಣೆ, ರೇಷ್ಮೆ ಅಭಿವೃದ್ಧಿ, ಕೆಆರ್ಎಸ್ ನೀಲನಕ್ಷೆ, ನಂಬೂದರಿ ಮೊಲೆ ತೆರಿಗೆ ವಿರೋಧ, ಶೃಂಗೇರಿ ಮಠ ರಕ್ಷಣೆಯಲ್ಲಿ ಟಿಪ್ಪು ತೋರಿದ ನಿಲುವು ಇತಿಹಾಸದಲ್ಲಿ ಅಳಿಯದ ಗುರುತು,” ಎಂದು ಹೇಳಿದರು. “ಯುವಕರು ಟಿಪ್ಪುವಿನ ನಿಜವಾದ ಇತಿಹಾಸ ಅರಿತುಕೊಳ್ಳಬೇಕು,” ಕರೆ ನೀಡಿದರು.
ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಮಾತನಾಡಿ, “ಟಿಪ್ಪುಸುಲ್ತಾನ್ ಕೇವಲ ಮುಸ್ಲಿಂ ಆಡಳಿತಗಾರನಲ್ಲ; ಭಾವೈಕ್ಯತೆ–ಅಭಿವೃದ್ಧಿಗೆ ಒತ್ತು ನೀಡಿದ ರಾಜ. ಸ್ವಾತಂತ್ರ್ಯಕ್ಕಾಗಿ ಮಕ್ಕಳನ್ನೇ ಒತ್ತೆಯಿಟ್ಟಂತಹ ತ್ಯಾಗ ಮಾಡಿದವರು,” ಎಂದು ಹೇಳಿದರು.
ಮಾಜಿ ಪ.ಪಂ ಅಧ್ಯಕ್ಷ ರವಿ ಭಜೆಂತ್ರಿ, “ಹೈದರ್ ಅಲಿ ಶಿಕ್ಷಣದ ಮಹತ್ವ ಅರಿತವರಾಗಿದ್ದು, ಟಿಪ್ಪುಸುಲ್ತಾನ್ ಕನ್ನಡ, ಫ್ರೆಂಚ್, ಇಂಗ್ಲಿಷ್ ಸೇರಿ ಹಲವಾರು ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ಮೈಸೂರು–ಆಂಗ್ಲ ಯುದ್ಧಗಳಲ್ಲಿ ವೀರರಾಗಿ ಹೋರಾಡಿ ತಮ್ಮ ಜೀವತ್ಯಾಗ ಮಾಡಿದರು,” ಎಂದು ಸ್ಮರಿಸಿದರು. “ಶಿಕ್ಷಣವೇ ಇಂದಿನ ಶಕ್ತಿ; ಯುವಕರು ಟಿಪ್ಪುವಿನ ಧೈರ್ಯದಿಂದ ಪ್ರೇರಣೆ ಪಡೆಯಲಿ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಹೋನ್ನೂರಸಾಬ ಮೇಸ್ತ್ರಿ, ಆಫೀಸ್ ಫಾರೂಕ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತ್ ಹುಸೇನ, ಪಟ್ಟಣ ಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ್, ಸದಸ್ಯರು ಹನುಮಂತ ಬಸಿರಿಗಿಡದ, ಮದರ್ಸಾಬ ಸಂತ್ರಸ್, ಖಾಜ ಅಗರಬತ್ತಿ, ಮಕ್ತುಂಸಾಬ, ಮೌಲಾನ ಅಹ್ಮದ್, ಖಲಂದರ ಹಣಗಿ, ರಾಮಣ್ಣ ಆಗೋಲಿ, ಸುಭಾನ ಸೖಯಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.