🚨BREAKING NEWS :” ಬಾಂಬ್ ಬೆದರಿಕೆ ಈ-ಮೇಲ್ : ಗದಗ–ಮಂಗಳೂರನಲ್ಲಿಆತಂಕ .!ಜಿಲ್ಲಾಡಳಿತ ಭವನದಲ್ಲಿ ಹೈ ಅಲರ್ಟ್.!ಎರಡು ಗಂಟೆಗಳ ಕಾಲ ಶೋಧ.!”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಗದಗ/ಮಂಗಳೂರು: ರಾಜ್ಯದಲ್ಲಿ ಮತ್ತೆ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಗದಗ ಜಿಲ್ಲೆಯ ಜಿಲ್ಲಾಡಳಿತ ಭವನ ಹಾಗೂ ಮಂಗಳೂರಿನ ಆರ್ಟಿಒ ಕಚೇರಿಗೆ ಬಾಂಬ್ ಬೆದರಿಕೆ ಹಾಕಿರುವ ಘಟನೆಗಳು ವರದಿಯಾಗಿವೆ.
ಗದಗ ಜಿಲ್ಲೆಯ ಜಿಲ್ಲಾಡಳಿತ ಭವನಕ್ಕೆ ಅರ್ನಾ ಅಶ್ವಿನ್ ಶೇಖರ್ ಎಂಬ ಹೆಸರಿನಿಂದ ಇಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಬಾಂಬ್ ಬೆದರಿಕೆ ಕರೆ/ಇ-ಮೇಲ್ ಬಂದಿದೆ. ಜಿಲ್ಲಾಡಳಿತ ಭವನದ ಐದು ಕಡೆಗಳಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದ್ದು, ಇದರಿಂದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿದೆ.
ಬೆದರಿಕೆ ಮಾಹಿತಿ ಲಭಿಸುತ್ತಿದ್ದಂತೆಯೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಬಾಂಬ್ ತನಿಖಾ ದಳ, ಶ್ವಾನ ದಳ ಹಾಗೂ ASC ತಂಡ ತಕ್ಷಣ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಜಿಲ್ಲಾಡಳಿತ ಭವನದ ಒಳಗೆ ಹಾಗೂ ಹೊರಭಾಗದಲ್ಲಿ ಸುದೀರ್ಘ ಶೋಧ ಕಾರ್ಯ ನಡೆಸಲಾಯಿತು.
ಶೋಧ ಕಾರ್ಯದ ವೇಳೆ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಇದು ಹಸಿಬಾಂಬ್ ಕರೆ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕರೆ ಮಾಡಿದ ವ್ಯಕ್ತಿಯ ವಿವರ ಹಾಗೂ ಕರೆ/ಇ-ಮೇಲ್ ಮೂಲ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.
ಇದೇ ವೇಳೆ ಮಂಗಳೂರಿನ ಆರ್ಟಿಒ ಕಚೇರಿಗೂ ಬಾಂಬ್ ಬೆದರಿಕೆ ಹಾಕಲಾಗಿದ್ದು, ಅಲ್ಲಿಯೂ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲಿಯೂ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
•ಬೀದರ್ ಡಿಸಿ ಕಚೇರಿಗೂ ಬಾಂಬ್ ಬೆದರಿಕೆ
ಇನ್ನು ಇತ್ತೀಚೆಗೆ ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದೇವೆ ಅದನ್ನ ಆದಷ್ಟು ಬೇಗ ಬ್ಲಾಸ್ಟ್ ಮಾಡಲಾಗುವುದು ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಮೇಲ್ ಐಡಿಗೆ ಅಪರಿಚಿತರ ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿತ್ತು.