🟢BREAKING NEWS : “ಬೆಂಗಳೂರು| ಬಿಗ್ ಬಾಸ್ ಕನ್ನಡ–12ಕ್ಕೆ ಭವ್ಯ ತೆರೆ : ಗಿಲ್ಲಿ ನಟ ವಿಜೇತ, ರಕ್ಷಿತಾ ಶೆಟ್ಟಿ ರನ್ನರ್ಅಪ್!”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್:
ಬೆಂಗಳೂರು, ಜ.18: 112 ದಿನಗಳ ತೀವ್ರ ಸ್ಪರ್ಧೆ, ಭಾವನಾತ್ಮಕ ಪಯಣ ಹಾಗೂ ನಿರಂತರ ಮನರಂಜನೆಯೊಂದಿಗೆ ಸಾಗಿದ ಬಿಗ್ ಬಾಸ್ ಕನ್ನಡ–12 ಸೀಸನ್ ಭಾನುವಾರ ರಾತ್ರಿ ಭವ್ಯ ಗ್ರ್ಯಾಂಡ್ ಫಿನಾಲೆಯೊಂದಿಗೆ ಅಂತ್ಯವಾಯಿತು. ಕಿಚ್ಚಾ ಸುದೀಪ್ ಅವರ ನಿರೂಪಣೆಯಲ್ಲಿ ನಡೆದ ಈ ಸೀಸನ್ನಲ್ಲಿ ಗಿಲ್ಲಿ ನಟ ವಿಜೇತರಾಗಿ ಹೊರಹೊಮ್ಮಿ ಬಿಗ್ ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ವಿಜೇತರಾದ ಗಿಲ್ಲಿ ನಟ ಅವರಿಗೆ ರೂ.50 ಲಕ್ಷ ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಕಂಪನಿಯ ಐಷಾರಾಮಿ ಕಾರು ಲಭಿಸಿದೆ. ರಕ್ಷಿತಾ ಶೆಟ್ಟಿ ಪ್ರಥಮ ರನ್ನರ್ಅಪ್ ಸ್ಥಾನ ಪಡೆದರೆ, ಅಶ್ವಿನಿ ಗೌಡ ಅಂತಿಮ ಹಂತದಲ್ಲಿ ಹೊರನಡೆದು ಟಾಪ್–3 ಸ್ಥಾನಕ್ಕೆ ತೃಪ್ತಿಪಟ್ಟರು.
ಫಿನಾಲೆಯ ಕೊನೆಯ ಎಲಿಮಿನೇಷನ್ನಲ್ಲಿ ಟಾಪ್–3 ಸ್ಪರ್ಧಿಗಳನ್ನು ಪೀಠಗಳ ಮೇಲೆ ನಿಲ್ಲಿಸಲಾಗಿದ್ದು, ಕೆಂಪು ಬೆಳಕು ಅಶ್ವಿನಿ ಗೌಡ ಅವರ ಪೀಠದಲ್ಲಿ ಬೆಳಗಿತು. ವಿಜೇತನ ಘೋಷಣೆಗೆ ಕೆಲವೇ ಕ್ಷಣಗಳ ಮೊದಲು ಅವರ ಪಯಣ ಅಂತ್ಯಗೊಂಡಿದ್ದು, ಈ ದೃಶ್ಯ ಎಲ್ಲರನ್ನು ಭಾವುಕರನ್ನಾಗಿಸಿತು.
ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚಾ ಸುದೀಪ್ ಸ್ವತಃ ಬಿಗ್ ಬಾಸ್ ಮನೆಗೆ ಪ್ರವೇಶಿಸಿ ಸ್ಪರ್ಧಿಗಳೊಂದಿಗೆ ಭಾವುಕ ಕ್ಷಣಗಳನ್ನು ಹಂಚಿಕೊಂಡರು. ತಪ್ಪುಗಳಾಗಿದಾಗ ಮಾರ್ಗದರ್ಶನ ನೀಡಿದ ಸುದೀಪ್ ಅವರ ಪಾತ್ರವನ್ನು ಸ್ಪರ್ಧಿಗಳು ಶ್ಲಾಘಿಸಿದರು. ಸುದೀಪ್ ಎಲ್ಲ ಸ್ಪರ್ಧಿಗಳಿಗೆ ಸಹಿ ಮಾಡಿದ ಫೋಟೋಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು.



