ಕರ್ಲ್ಬುಗಿ ವಿಕಾಸ ಅಕಾಡೆಮಿ ಕಾರ್ಯ ಶ್ಲಾಘನೀಯ- ಗದ್ದುಗೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಭಾರತವು ಸಂಸ್ಕೃತಿ, ಪರಂಪರೆಯಲ್ಲಿ ಶ್ರೀಮಂತಿಕೆಯನ್ನು ಹೊಂದಿದ ರಾಷ್ಟ್ರ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ ನಮ್ಮದು. ಮಾನವ ವಿಕಾಸಕ್ಕೆ ಒತ್ತು ನೀಡುವದಕ್ಕಿಂತ ಮಾನವೀಯತೆ ಮತ್ತು ನಿಸರ್ಗ, ಪರಿಸರ ಸಂರಕ್ಷಣೆಯೊಂದಿಗೆ ವಿಕಾಸತೆಯನ್ನು ಹೊಂದುವ ನಿಟ್ಟಿನಲ್ಲಿ ಶ್ರೀಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಮತ್ತು ಕಲಬುರ್ಗಿ ವಿಕಾಸ ಅಕಾಡೆಮಿ ಹಾಗೂ ಭಾರತ ವಿಕಾಸ ಸಂಗಮ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವದು ಶ್ಲಾಘನೀಯ ಎಂದು ಚರಬಸವೇಶ್ವರ ಸಂಸ್ಥಾನದ ಡಾ.ಶರಣು ಬಿ. ಗದ್ದುಗೆ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ೭ ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿ ಅಂಗವಾಗಿ ರವಿವಾರ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಸಸಿಗೆ ನೀರೆರಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಡಿಸಿದ್ದು, ವಯಸ್ಸಿನ ಮಿತಿ ಅಳವಡಿಸದಿರುವದು ಉತ್ತಮ ಕಾರ್ಯವಾಗಿದೆ. ಪ್ರತಿಭಾವಂತ ಕಲಾವಿದರಿಗೆ ವಯಸ್ಸಿನ ಮಿತಿ ನಿಗದಿ ಪಡಿಸದಿರುವದು ಉತ್ತಮ ನಿರ್ಧಾರವಾಗಿದೆ ಎಂದರು.
ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಕೆಲಸ ನಡೆಯಲಿದೆ. ಆಯಾ ಸಾಂಸ್ಕೃತಿಕ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯವು ನಡೆಯಲಿದೆ.
ಇಂತಹ ಸಾವಿರಾರು ಕಾರ್ಯಕ್ರಮಗಳನ್ನು ಸುಮಾರು ೨೫ ವರ್ಷದಿಂದ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ನಡೆಸಿಕೊಂಡು ಬಂದಿದೆ. ಹೈದ್ರಾಬಾದ್ ಕರ್ನಾಟಕ ಎಂಬ ಹೆಸರನ್ನು ತೆಗೆದು ಹಿಂದುಳಿದ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳುವದು ಬೇಡ ನಾವೆಲ್ಲ ಶ್ರಮವಹಿಸಿ ವಿಕಸತೆ ಹೊಂದೋಣವೆಂದು ಹೇಳಿದರು.ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮ ಜಂಟಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡು ಬಂದಿವೆ. ಫೆಬ್ರವರಿಯಲ್ಲಿ ಕಲಬುರ್ಗಿ ಸುಮಾರು ೨೪೦ ಎಕರೆ ಪ್ರದೇಶದಲ್ಲಿ ಕೊತ್ತಲ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಅಂಗವಾಗಿ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ನಾವೆಲ್ಲ ತನುಮನಧನದಿಂದ ಸಹಕರಿಸೋಣ ಎಂದರು.
ಡಿಡಿಯು ಶಿಕ್ಷಣ ಸಂಸ್ಥೆಯ ಭೀಮಣ್ಣ ಮೇಟಿ, ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ್ ಮತ್ತು ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಮಾತನಾಡಿದರು. ಭೀಮಣ್ಣಗೌಡ ಬೈರಡ್ಡಿ, ಉಪ ಪ್ರಾಂಶುಪಾಲ ಮಲ್ಲಣ್ಣಗೌಡ ಬಿರೆದಾರ, ಶಿವರಾಜ ದೇಶಮುಖ, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಉಪಸ್ಥಿತರಿದ್ದರು.
ಕಲ್ಬುರ್ಗಿ ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಅಮೃತರಾವ್ ಮುಲಗೆ ಅದ್ಯಕ್ಷತೆವಹಿಸಿದ್ದರು. ಅಕಾಡೆಮಿಯ ನಾರಾಯಣಾಚಾರ್ಯ ಸಗರ ಸ್ವಾಗತಿಸಿದರು. ವೀರೇಶ ಉಳ್ಳಿ ನಿರೂಪಿಸಿ ವಂದಿಸಿದರು
ನಂತರ ರಂಗೋಲಿ, ಭಜನಾ ಮಂಡಳಿ, ಭರತ ನಾಟ್ಯ ಸೇರಿದಂತೆ ಕೋಲಾಟ, ಗಾಯನ ಇತರೆ  ಸ್ಪರ್ಧೆಗಳು ಜರುಗಿದವು.