ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಲು ಕಂದಕೂರ ಸಲಹೆ

By admin

 

ಗುರುಮಠಕಲ್ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ 

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಅಂಗವಿಕಲರು, ವಿಶೇಷ ಚೇತನರು ಮುಖ್ಯವಾಹಿನಿಗೆ ಬರಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಸೌಲಭ್ಯ ಒದಗಿಸುತ್ತಿದ್ದು, ಸರ್ಕಾರಿ ಯೋಜನೆಗಳ ಸದುಪಯೋಗಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಇಲ್ಲಿನ ಗುರುಮಠಕಲ್ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ವತಿಯಿಂದ ಶಾಸಕರ ಅನುದಾನದಲ್ಲಿ ನೀಡಲಾಗುವ ೧೯ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು, ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳುವುದರ ಜೊತೆಗೆ ಗಾಡಿ ನಡೆಸುವಾಗ ನಮ್ಮ ಕುಟುಂಬದ ನೆನಪಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ಹೇಳಿದರು.

ಅಂಗವಿಕಲರ ಬದುಕು ಸುಧಾರಣೆಗಾಗಿ ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನಗಳನ್ನು ನೀಡಲಾಗುತ್ತಿದ್ದು, ಈ ತ್ರಿಚಕ್ರ ವಾಹನಗಳು ಅಂಗವಿಕಲರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಉಪ ನಿರ್ದೇಶಕ ಶರಣಪ್ಪ ಪಾಟೀಲ, ಕೃಷ್ಣಾಜೀ ಕುಲಕರ್ಣಿ, ಭೋಜನಗೌಡ ಯಡ್ಡಳ್ಳಿ, ಸೋಮನಗೌಡ ಬೆಳಗೇರಾ, ಅಜಯರಡ್ಡಿ ಎಲ್ಹೇರಿ, ರಾಮಣ್ಣ ಕೋಟಗೇರಾ, ಸಣ್ಣೆಪ್ಪ ಕೊಟಗೇರಾ, ಈಶ್ವರನಾಯಕ ಚಿಂತನಹಳ್ಳಿ, ಜಯಣ್ಣ ಎಂಪಾಡ, ಬಾಲು ದಾಸರಿ, ಬಾನು ಮೇಧಾ, ಬಂದಪ್ಪಗೌಡ ಲಿಂಗೇರಿ, ಬಸನಗೌಡ ಚಾಮನಳ್ಳಿ, ಶರಣಪ್ಪ ಮೋಟ್ನಳ್ಳಿ ಸೇರಿದಂತೆ ಇತರರಿದ್ದರು.

ಸುರಕ್ಷತೆಗಾಗಿ ಹೆಲ್ಮೆಟ್ ವಿತರಣೆ

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆವತಿಯಿಂದ ನೀಡಲಾಗುವ ತ್ರಿಚಕ್ರ ವಾಹನಗಳ ಫಲಾನುಭವಿಗಳಿಗೆ ಹೆಲ್ಮೆಟ್ ನೀಡದಿರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ವೈಯಕ್ತಿಕವಾಗಿ ಎಲ್ಲಾ ಫಲಾನುಭವಿಗಳಿಗೆ ಹೆಲ್ಮೆಟ್ ನೀಡಿ ಕಡ್ಡಾಯವಾಗಿ ಧರಿಸಿ ವಾಹನ ಚಲಾಯಿಸುವಂತೆ ಸೂಚಿಸಿದರು.

ಹೆಲ್ಮೆಟ್ ಧರಿಸುವುದರಿಂದ ನಮ್ಮ ಜೀವ ಉಳಿಯುವುದರ ಜೊತೆಗೆ ನಮ್ಮ ಕುಟುಂಬವನ್ನು ನಾವು ಉಳಿಸಿದಂತಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಫಲಾನುಭವಿಗಳಿಗೆ ಸೂಚಿಸಿದರು.