STATE NEWS :”ಬೆಂಗಳೂರು| ಎಡಿಬಿ 2ಸಾವಿರ ಕೋಟಿ ನೆರವಲ್ಲ, ಟ್ರೋಜನ್ ಹಾರ್ಸ್!” ಸಾರ್ವಜನಿಕ ಶಿಕ್ಷಣಕ್ಕೆ ಸಾವಿನ ಘಂಟೆ ಬಾರಿಸುತ್ತಿದೆ ಸರ್ಕಾರ.! : ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಭಾರಿ ಆಕ್ರೋಶ”

By admin

“ಬೆಂಗಳೂರು|ಎಡಿಬಿ 2ಸಾವಿರ ಕೋಟಿ ನೆರವಲ್ಲ, ಟ್ರೋಜನ್ ಹಾರ್ಸ್!” — ಸಾರ್ವಜನಿಕ ಶಿಕ್ಷಣಕ್ಕೆ ಸಾವಿನ ಘಂಟೆ ಬಾರಿಸುತ್ತಿದೆ ಸರ್ಕಾರ : ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಭಾರಿ ಆಕ್ರೋಶ”

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌  ನ್ಯೂಸ್‌,

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ (ADB) ನಿಂದ ₹2,000 ಕೋಟಿ ಸಾಲ ಪಡೆದು ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಸ್ಥಾಪಿಸುವ ಸರ್ಕಾರದ ಯೋಜನೆ, ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ವಲಯದ ವಶಕ್ಕೆ ಒಪ್ಪಿಸುವ “ಟ್ರೋಜನ್ ಹಾರ್ಸ್” ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (AISEC) ಕರ್ನಾಟಕ  ರಾಜ್ಯ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

 ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ AISEC ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅವರು, “ಈ ಸಾಲ ಸಾರ್ವಜನಿಕ ಶಿಕ್ಷಣದ ನವೀಕರಣವಲ್ಲ, ಬದಲಿಗೆ ಅದಕ್ಕೆ ಮರಣಘಂಟೆ ಬಾರಿಸುವ ಹುನ್ನಾರವಾಗಿದೆ. ವಿಶ್ವಬ್ಯಾಂಕ್ ಹಾಗೂ ಎಡಿಬಿಯ ಸಾಲಗಳು ಪರೋಪಕಾರಕ್ಕಾಗಿ ನೀಡುವುದಿಲ್ಲ. ಅವು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವ ‘ಸುಧಾರಣೆ’ಗಳನ್ನು ಜಾರಿಗೊಳಿಸುವ ಸಾಧನವಾಗಿದೆ. ಒಂದು ಕೆಪಿಎಸ್ ಸ್ಥಾಪಿಸಲು ಹತ್ತಿರದ ಹಲವು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಯೋಜನೆ ಸರ್ಕಾರದ ನಿಖರ ಉದ್ದೇಶವನ್ನು ಬಯಲಿಗೆಳೆಯುತ್ತದೆ,” ಎಂದು ಆರೋಪಿಸಿದರು.

“ಸರ್ಕಾರವು ಎಲ್ಲ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ, ಶಿಕ್ಷಕರು ಹಾಗೂ ಅನುದಾನ ಒದಗಿಸಲು ವಿಫಲವಾಗಿರುವಾಗ, ಕೆಲವೇ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಈ ಕ್ಲಸ್ಟರ್ ಮಾದರಿಯು ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಯ ಅತ್ಯಂತ ಹಾನಿಕಾರಕ ಅಂಶವಾಗಿದ್ದು, ಎನ್‌ಇಪಿ ವಿರೋಧಿಸಿರುವ ಸರ್ಕಾರವೇ ಅದನ್ನು ಜಾರಿಗೊಳಿಸುತ್ತಿರುವುದು ಜನಾದೇಶಕ್ಕೆ ದ್ರೋಹ,” ಎಂದು ಕಿಡಿ ಕಾರಿದರು.

“ಸಾರ್ವಜನಿಕ ಶಾಲೆಗಳನ್ನು ಮುಚ್ಚಿ, ಸರ್ಕಾರಿ ಭೂಮಿಯನ್ನು ಹಾಗೂ ಮಕ್ಕಳ ಭವಿಷ್ಯವನ್ನು ಖಾಸಗಿ ಲಾಭದ ಆಯಸ್ಕಾಂತಗಳಿಗೆ ಹಸ್ತಾಂತರಿಸುವ ವಿನ್ಯಾಸವೇ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು. ಶಿಕ್ಷಣ ವಿರೋಧಿ ನೀತಿಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವ್ಯತ್ಯಾಸವೇ ಇಲ್ಲ,” ಎಂದು AISEC ಖಂಡಿಸಿದೆ.

“AISEC ರಾಜ್ಯ  ಕಾರ್ಯದರ್ಶಿ ಮಹೇಶ್ ಎಸ್.ಜಿ.  ಪ್ರತಿಕ್ರಿಯಿಸಿದ ಅವರು, “ಪ್ರಜಾಸತ್ತಾತ್ಮಕ, ಸಾರ್ವಜನಿಕ ಶಿಕ್ಷಣದ ಮೇಲೆ ನಡೆಯುತ್ತಿರುವ ಈ ಅಂತಿಮ ಆಕ್ರಮಣವನ್ನು ತಡೆಯಲು ಪ್ರತಿಯೊಬ್ಬ ಶಿಕ್ಷಕ, ವಿದ್ಯಾರ್ಥಿ ಮತ್ತು ಪೋಷಕರು ಒಂದಾಗಿ  ಎದ್ದು ನಿಲ್ಲಿ-ಸಾರ್ವಜನಿಕ ಬಲಿಷ್ಠ ಶಿಕ್ಷಣ ಉಳಿಸುವ ಬೃಹತ್‌ ಚಳುವಳಿ ನಿರ್ಮಿಸಬೇಕು,” ಎಂದು ಕರೆ ನೀಡಿದರು.