“ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಸುಧಾರಣೆಗೆ ವಿಶೇಷ ಗಮನ ನೀಡಿ” : ಮನೋಜ್. ಜೈನ್

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಯಾದಗಿರಿ ನಗರದ, ಭೀಮಾಬ್ರಿಡ್ಜ ಸೇರಿದಂತೆ  ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್,ವಕ್ಫ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಯಾದಗಿರಿ ನಗರ, ಭೀಮಾ ಬ್ರಿಡ್ಜ ವ್ಯಾಪ್ತಿಯಲ್ಲಿ ರಸ್ತೆ ತೀವ್ರ ಕೆಟ್ಟಿದ್ದು,ಕಳೆದ ಆರು  ತಿಂಗಳುಗಳಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಈವರೆಗೆ ಕ್ರಮ ಕೈಗೊಳ್ಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಜಿಲ್ಲೆಯ ರಸ್ತೆಗಳ,   ತಗ್ಗು ಗುಂಡಿಗಳ ದುರಸ್ತಿಗೆ ತಕ್ಷಣ ಕ್ರಮಕೈಗೊಳ್ಳಬೇಕು.ರಸ್ತೆಗಳ ನಿರ್ವಹಣೆಗೂ ಸಂಬಂಧಿಸಿದ ಅಧಿಕಾರಿಗಳು ಅವಶ್ಯಕ ಕ್ರಮ  ಕೈಗೊಳ್ಳಲು ಅವರು ಕಟ್ಟುನಿಟ್ಟಿನ  ಸೂಚನೆ ನೀಡಿದರು.

ಅದರಂತೆ ನಗರಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ,ಬೀದಿ ದೀಪಗಳ ಅಳವಡಿಕೆ,ರಸ್ತೆಗಳ ದುರಸ್ತಿ, ಒಳಚರಂಡಿಗಳ ಸುಧಾರಣೆಗೆ ವಿಶೇಷ ಗಮನ ನೀಡಬೇಕು.ಪಿ.ಆರ್.ಇ.ಡಿ,ಕೆ.ಆರ್. ಐ.ಡಿ.ಎಲ್,ನಿರ್ಮಿತಿ ಕೇಂದ್ರ, ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಸಮರ್ಪಕವಾಗಿ ಬಳಸಿ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ, ಎನಿಮಿಯದಿಂದ ಬಳಲುತ್ತಿ ರುವ ಆರೋಗ್ಯ ಮಹಿಳೆಯರ- ಮಕ್ಕಳ   ಸುಧಾರಣೆಗೆ ಪೈಲಟ್ ಯೋಜನೆ ರೂಪಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು.

ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಗುರಮಠಕಲ್ ಕ್ಷೇತ್ರ ಉತ್ತಮ ವಾತಾವರಣ ಮತ್ತು ಪರಿಸರ ಹೊಂದಿದೆ.ಅದರಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ತಲಾ ಮೂರು ಹೋಬಳಿಯಂತೆ ತೋಟಗಾರಿಕೆ ಬೆಳೆಗಳ ಉತ್ತೇಜನಕ್ಕೆ ವಿಶೇಷ ಗಮನ ನೀಡಬೇಕು.ಈ ಕುರಿತು ಯೋಜನೆ ರೂಪಿಸಿ ಸಲ್ಲಿಸುವಂತೆ  ಅವರು ಸೂಚಿಸಿದರು.

ಜಿಲ್ಲೆಯಲ್ಲಿ 71 ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳಿವೆ.261 ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಗಳಿವೆ.ಅದರಂತೆ ಜಲಾಶಯಗಳೂ ಸಹ ಇರುವದರಿಂದ ಮೀನುಗಾರಿಕೆಯಿಂದ ಆರ್ಥಿಕ ಲಾಭಕ್ಕೆ ವಿಪುಲ ಅವಕಾಶವಿದೆ.ಇದಕ್ಕೆ ಸೂಕ್ತ ಪ್ರೋತ್ಸಾಹ ನೀಡಬೇಕು. ಅದರಂತೆ ಟೆಂಡರ್ ಪ್ರಕ್ರಿಯೆ ಗ್ರಾಮ ಪಂಚಾಯತ್ ದಿಂದ ಮಾಡದೇ ನೋಡಲ್ ಅಧಿಕಾರಿಗಳ ಮೂಲಕ ಕೈಗೊಳ್ಳಲು ಯೋಜನೆ ರೂಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿ ಯೋಜನೆಯಡಿ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಅವರವರ ವಿದ್ಯಾರ್ಹತೆ ಆಧಾರದಲ್ಲಿ ನಿಗದಿತ ಕಂಪನಿಯಿಂದಲೇ ತರಬೇತಿಗೊಳಿಸಿ ಅದೇ ಕಂಪನಿಯಲ್ಲಿ ಉದ್ಯೋಗ ದೊರಕಿಸಲು ಪ್ರಯತ್ನಿಸಬೇಕು ಎಂದು ಕೌಶಲ್ಯಾಭಿವೃದ್ದಿ ಇಲಾಖೆ  ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ವಿವಿಧ  ಇಲಾಖೆಗಳ  ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಲಾಭ ಅರ್ಹರಿಗೆ ದೊರಕಿಸಬೇಕು.ಸಿಡಿಲು ಹಾಗೂ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿರುವದರಿಂದ ವಿಶೇಷ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಲುಂಬಿನಿ ಗಾರ್ಡನ್,ಜಿಲ್ಲಾಡಳಿತ ಭವನದಲ್ಲಿ ಸೌಂದರ್ಯೀಕರಣಕ್ಕೆ ಗಮನ ನೀಡಬೇಕು.  ಜಿಲ್ಲೆಯಲ್ಲಿ  471ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕರ  ತಕ್ಷಣ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು.ಕಾರ್ಮಿಕರಿಗೆ ಇರುವ ಯೋಜನೆಗಳ ಲಾಭ ಕಾರ್ಮಿಕ ಇಲಾಖೆಯಿಂದ ದೊರಕಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಸುಶೀಲಾ. ಬಿ.,ಜಿಲ್ಲಾ  ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಲವೀಶ ಒರಡಿಯಾ,ಜಿಲ್ಲಾ  ಪೋಲಿಸ್ ವರಿಷ್ಠಾಧಿಕಾರಿ ಸಂಗೀತಾ.ಜಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.