“ಗಂಗಾವತಿ : ಪಡಿತರ ಅಕ್ಕಿ ಕಳ್ಳಸಾಗಣೆ ದಂಧೆಕೋರರ ವಿರುದ್ಧ ಕ್ರಮಕ್ಕೆ : ಭಾರತೀಯ ಪ್ರಜಾ ಸೇನೆ ಒತ್ತಾಯ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗಂಗಾವತಿ:
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳಸಾಗಣಿಕೆ ದಂಧೆಯನ್ನು ತಕ್ಷಣ ತಡೆಗಟ್ಟಬೇಕೆಂದು ಭಾರತೀಯ ಪ್ರಜಾ ಸೇನೆ ವತಿಯಿಂದ ಅಧಿಕಾರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ರೇಷನ್ ಅಂಗಡಿಗಳ ಬಳಿ ಅಕ್ಕಿ ದಲ್ಲಾಳಿಗಳು ಗ್ರಾಹಕರಿಂದ ನಿಗದಿತ ಮೊತ್ತ ನೀಡಿ ಪಡಿತರ ಅಕ್ಕಿಯನ್ನು ಖರೀದಿಸುತ್ತಿದ್ದಾರೆ. ಹಣದ ಆಸೆಯಿಂದ ಕೆಲವು ಪಡಿತರದಾರರು ತಮ್ಮ ಹಕ್ಕಿನ ಅಕ್ಕಿಯನ್ನು ಈ ದಲ್ಲಾಲಿಗಳಿಗೆ ಮಾರಾಟ ಮಾಡುವುದರಿಂದ ಅಕ್ರಮ ವ್ಯಾಪಾರ ಜೋರಾಗಿ ನಡೆಯುತ್ತಿದೆ ಎಂದು ಹೇಳಿದರು.
“ತಾಲೂಕ ಆಹಾರ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಜಾಣ ಕುರುಡರಂತೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಪಡಿತರ ಅಕ್ಕಿ ದಂಧೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ” ಎಂದು ಆರೋಪಿಸಿದರು.
ಇತ್ತೀಚೆಗೆ ಬೃಹತ್ ಪ್ರಮಾಣದಲ್ಲಿ ಪಡಿತರ ಅಕ್ಕಿ ಲಾರಿಗಳಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಾಗಾಟವಾಗುತ್ತಿರುವುದು ಪತ್ತೆಯಾದರೂ, ಈ ದಂಧೆ ಇನ್ನೂ ನಿಂತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾತ್ರಿ ವೇಳೆ ಟಾಟಾ ಏಸ್, ಹಾಗೂ ಅಪ್ಪಿ ಆಟೋಗಳಲ್ಲಿ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದು, ಕಾಳಸಂತೆಯಲ್ಲಿ ತೆರೆಯಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದು, ಈ ಕುರಿತು ಪತ್ರಿಕೆಯಲ್ಲಿ ವರದಿಗಳು ಪ್ರಕಟಗೊಂಡಿವೆ.ಭಾರತೀಯ ಪ್ರಜಾ ಸೇನೆಯ ಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ, “ಅಕ್ರಮ ಪಡಿತರ ಅಕ್ಕಿ ವ್ಯಾಪಾರದಲ್ಲಿ ಭಾಗಿಯಾಗಿರುವ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಪ್ರತಿದಿನ ಕಾಳಸಂತೆಯಲ್ಲಿ ನಡೆಯುವ ಪಡಿತರ ಅಕ್ಕಿಯನ್ನು ಮಾರಾಟ ಮತ್ತು ವಾಹನಗಳಲ್ಲಿ ಸಾಗಾಟಕ್ಕೆ ತಡೆಹಿಡಿಯಲು ತಕ್ಷಣದ ಕ್ರಮ ಅಗತ್ಯವಾಗಿದೆ” ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರು ಕೂಡ ಪಡಿತರ ಅಕ್ಕಿ ಕಳ್ಳಸಾಗಣಿಕೆಯ ಕುರಿತು ಮಾಹಿತಿ ನೀಡುವ ಮೂಲಕ ಸರ್ಕಾರದ ಯೋಜನೆಗಳ ಸದುಪಯೋಗ ಜನರಿಗೆ ತಲುಪುವಂತೆ ಸಹಕರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.