🔵 LOCAL EXPRESS :”ಕೊಪ್ಪಳ| ಜಾನಪದ ಗಾಯಕಿ ಗೌರಿ ಗೋನಾಳ ಸೇರಿ  ಕಲ್ಯಾಣ ಕರ್ನಾಟಕದ 7 ಸಾಧಕರು ರಾಜ್ಯ ಯುವ ಪ್ರಶಸ್ತಿಗೆ ಭಾಜನ”

By admin

🔵 LOCAL EXPRESS :“ಕೊಪ್ಪಳ| ಜಾನಪದ ಗಾಯಕಿ ಗೌರಿ ಗೋನಾಳ ಸೇರಿ  ಕಲ್ಯಾಣ ಕರ್ನಾಟಕದ 7 ಸಾಧಕರು ರಾಜ್ಯ ಯುವ ಪ್ರಶಸ್ತಿಗೆ ಭಾಜನ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ನೀಡುವ ವಾರ್ಷಿಕ ಪ್ರತಿಷ್ಠಿತ ರಾಜ್ಯ ಯುವ ಪ್ರಶಸ್ತಿಗೆ ಕಲಬುರಗಿ ವಿಭಾಗದ ಏಳು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಎಸ್. ಬಾಲಾಜಿ ಹಾಗೂ ಕಲಬುರಗಿ ವಿಭಾಗೀಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಕೊಪ್ಪಳದ ಜಾನಪದ ಗಾಯಕಿ ಹಾಗೂ ಕ್ರಾಂತಿಕಾರಿ ಯುವ ಹೋರಾಟಗಾರ್ತಿ ಗೌರಿ ಗೋನಾಳ, ಬಳ್ಳಾರಿ ಜಿಲ್ಲೆಯ ಹಿರಿಯ ಪತ್ರಕರ್ತ ವೆಂಕಟೇಶ ಕುಲಕರ್ಣಿ, ವಿಜಯನಗರ ಜಿಲ್ಲೆಯ ಸಮಾಜ ಸೇವಕ ಎನ್. ವೆಂಕಟೇಶ (ಸ್ಲಂ ವೆಂಕಿ), ಕಲಬುರಗಿಯ ಕು. ಶ್ವೇತಾ ಕೆ., ಬೀದರ ಜಿಲ್ಲೆಯ ಸ್ವಾಮೀಜಿ ಕು. ಬಸವಜ್ಯೋತಿ, ಯಾದಗಿರಿಯ ಕು. ರೇಣುಕಾ ಹಾಗೂ ರಾಯಚೂರಿನ ಭರಮರೆಡ್ಡಿ ಅವರು ಸೇರಿದ್ದಾರೆ.

ಇದೇ ಜ.18 ರಂದು ಬೆಳಿಗ್ಗೆ 9 ಗಂಟೆಗೆ ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ನಡೆಯಲಿದೆ.
ಇದಕ್ಕೂ ಮುನ್ನ ಜ.17 ರಂದು ಕರ್ನಾಟಕ ಯುವ ಸಂಘಗಳ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ಸೂಡಿಮುಳ್ಳ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಯುವ ಸಂಭ್ರಮ, ಪಂಚಸಪ್ತತಿ ಪ್ರಶಸ್ತಿ ಪ್ರದಾನ, ಜಾನಪದ ಗಾಯನ ಹಾಗೂ ನೃತ್ಯ ಸ್ಪರ್ಧೆಗಳು ನಡೆಯಲಿದ್ದು, ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

 “ಈ ಗೌರವ ಹೋರಾಟದ ಪಯಣಕ್ಕೆ ಬಲ ತುಂಬಿದೆʼ

 “ಈ ಪ್ರಶಸ್ತಿ ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಜಾನಪದ ಕಲೆಯನ್ನು   ಜೀವಂತವಾಗಿಟ್ಟುಕೊಂಡು ಹೋರಾಡುತ್ತಿರುವ ಎಲ್ಲ ಯುವ ಕಲಾವಿದರಿಗೆ   ಸಲ್ಲುವ ಗೌರವ. ನನ್ನ ಹಳ್ಳಿ, ನನ್ನ ಜನರು ಹಾಗೂ ನನ್ನ ಕಲೆಗೆ ಇದು   ಮತ್ತಷ್ಟು ಬಲ ನೀಡಿದೆ.”

– ಗೌರಿ ಗೋನಾಳ, ಜಾನಪದ ಗಾಯಕಿ ,ಕೊಪ್ಪಳ