
ವಡಗೇರಾ : ಜನರು ಬಳಸುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳಿಂದ ಪ್ರಾಣಿಗಳಿಗೆ ಮಾತ್ರವಲ್ಲದೆ ಮನುಷ್ಯರ ಜೀವಕ್ಕೂ ಆಪತ್ತು ಇದೆ ಎಂದು ಕಾರ್ಯನಿರ್ವಾಹಕ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
ತಾಲ್ಲೂಕಿನ ತಡಿಬಿಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ವಿನೂತನ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಅವರು ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತಡಿಬಿಡಿ ಗ್ರಾಮ ಪಂಚಾಯತಿ ಪಿಡಿಒ ಗೋವಿಂದ ರಾಠೋಡ ಅವರ ಇಚ್ಛಾಶಕ್ತಿ ಯಿಂದ, ಈ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು, ಪ್ಲಾಸ್ಟಿಕ್ ಮುಕ್ತ ವಿನೂತನ ಅಭಿಯಾನದ ಕೈಗೊಳ್ಳಲಾಗಿದೆ. 1.ಕೆಜಿ ಪ್ಲಾಸ್ಟಿಕ್ ಗೆ 1ಕೆಜಿ ಸಕ್ಕರೆ ಎಂಬ ವಿಶಿಷ್ಟ ಅಭಿಯಾನದ ಮೂಲಕ ಗ್ರಾಮಸ್ಥರ ಗಮನ ಸೆಳೆದು ಪ್ಲಾಸ್ಟಿಕ್ ದಂತಹ ತ್ಯಾಜ್ಯ ವಸ್ತುಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈಗಾಗಾಲೇ ತಡಿಬಿಡಿ ಗ್ರಾಮ ಪಂಚಾಯತಿಯಲ್ಲಿ ಕ್ವಿಂಟಾಲ ಗಟ್ಟಲೆ ಸಕ್ಕರೆ ಇರಿಸಲಾಗಿದೆ, ಪ್ಲಾಸ್ಟಿಕ್ ವಸ್ತುಗಳು ನೀಡಿ ಸಕ್ಕರೆ ತೆಗೆದುಕೊಂಡು ಹೋಗಲು ಗ್ರಾಮದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮ ಮೂಡಿಸಲಾಗುತ್ತಿದೆ.
ಜನರು ದಿನನಿತ್ಯದಲ್ಲಿ ಯಥೇಚ್ಛವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳನ್ನು ಕಂಡಲ್ಲಿ ಬಿಸಾಕುವುದರಿಂದ ದುರ್ವಾಸನೆಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ತಿಪ್ಪೆಗುಂಡಿಯಲ್ಲಿ ಬಿದ್ದ ಪ್ಲಾಸ್ಟಿಕ್ ತಿಂದು ಪ್ರಾಣಿ ಪಕ್ಷಿಗಳ ಜೀವಕ್ಕೆ ಕಂಟಕ ತಂದಿವೆ. ಪ್ಲಾಸ್ಟಿಕ್ ಕೊಡ, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ದಂತ ಇತರ ವಸ್ತುಗಳಿಂದ ನೀರು, ಆಹಾರ ಸೇವಿಸಿ ದೇಹಕ್ಕೆ ಕ್ಯಾನ್ಸರ್ ನಂತಹ ಕಾಯಿಲೆಗಳು ಕೂಡ ಹರಡಿ ಮುಂದೊಂದು ದಿನ ಮನುಷ್ಯರಿಗೂ ಆಪತ್ತು ತರುವ ಸಾಧ್ಯತೆಯಿದೆ. ಹೀಗಾಗಿ ನಾವೆಲ್ಲರೂ ಪ್ಲಾಸ್ಟಿಕ್ ಬಳಕೆ ಕೈಬಿಟ್ಟು ಪರಿಸರಕ್ಕೆ, ಜೀವಕ್ಕೆ ಹಾನಿಯಾಗದ ವಸ್ತುಗಳನ್ನು ಬಳಕೆಮಾಡಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ಎಲ್ಲರು ಪ್ರಮಾಣಿಕ ಪ್ರಯತ್ನ ಮಾಡೋಣ ಎಂದರು.
ಎಸ್ಬಿಎಮ್ ಜಿಲ್ಲಾ ಸಂಯೋಜಕ ಶಿವಕುಮಾರ ಮಾತನಾಡಿ, 1 ಕೆಜಿ ಪ್ಲಾಸ್ಟಿಕ್ ಗೆ 1 ಕೆಜಿ ಸಕ್ಕರೆ ವಿತರಿಸುವ ಈ ಅಭಿಯಾನ ಕೇವಲ ಒಂದು ಗ್ರಾಮ ಪಂಚಾಯತಿಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ 17 ಗ್ರಾಮ ಪಂಚಾಯತಿಯಲ್ಲಿ ಈ ಅಭಿಯಾನ ಮಾಡಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ನಾವೆಲ್ಲರೂ ಬೆಂಬಲಿಸೋಣ ಎಂದರು.
ಗ್ರಾಪಂ ಅಧ್ಯಕ್ಷರಾದ ಉಮಾರಡ್ಡಿ, ಪಿಡಿಒ ಗೋವಿಂದ ರಾಠೋಡ, ಶಾಲಾ ಮುಖ್ಯ ಶಿಕ್ಷಕ ಸಿ.ಎಸ್ ಭೀಮರಾಯ ಹಾಗೂ ಎಸ್.ಬಿ.ಎಮ್ ಸಂಯೋಜಕರು, ಟಿಐಇಸಿ ದುರ್ಗೇಶ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
