STATE BREAKING NEWS :ಕರ್ನಾಟಕದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ: ರಾಜ್ಯದ ಸಿ.ಎಂ.,ಡಿಸಿಎಂ ಸೇರಿ ಅನೇಕ ಗಣ್ಯರಿಂದ ಸಂತಾಪದ ಅಲೆ

By admin

” ಬೆಂಗಳೂರು| ಕರ್ನಾಟಕದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ!

— ರಾಜ್ಯದ ಸಿ.ಎಂ.,ಡಿಸಿಎಂ ಸೇರಿ ಅನೇಕ ಗಣ್ಯರಿಂದ ಸಂತಾಪದ ಅಲೆ”

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್:

ಬೆಂಗಳೂರು: ಪರಿಸರ ಸಂರಕ್ಷಣೆಯ ಪರವಶ ಸೇವೆಗೆ ರಾಷ್ಟ್ರ-ವಿದೇಶಗಳಲ್ಲಿ ಗುರುತಿಸಿಕೊಂಡ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ “ವೃಕ್ಷಮಾತೆ” ಸಾಲುಮರದ ತಿಮ್ಮಕ್ಕ (114) ಅವರು  ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಿಮ್ಮಕ್ಕ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪ್ರಯೋಜನಕಾರಿಯಾಗದೇ ಶುಕ್ರವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದರು.

ಮಕ್ಕಳಿಲ್ಲದ ಕಾರಣ ಸಸಿಗಳನ್ನೇ ಮಕ್ಕಳಂತೆ ಪೊಸಿಕೊಂಡ ತಿಮ್ಮಕ್ಕ, ಪರಿಸರ ಲೋಕಕ್ಕೆ ಅಚಲ ಸೇವೆ ಸಲ್ಲಿಸಿದ ಅಪೂರ್ವ ವ್ಯಕ್ತಿತ್ವ. ಅವರ ಸಾಕುಮಗ ಉಮೇಶ್ ಬಳ್ಳೂರು ಅಂತ್ಯವರೆಗೂ ಅವರ ಆರೈಕೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.

•8 ಸಾವಿರಕ್ಕೂ ಹೆಚ್ಚು ಮರಗಳ ಪಾಲಿಗೆ ತಾಯಿ :

ಮಾಗಡಿ ತಾಲ್ಲೂಕಿನಲ್ಲಿನ ರಸ್ತೆ ಬದಿಯಲ್ಲಿ 4.5 ಕಿ.ಮೀ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ, ಕರ್ನಾಟಕದಾದ್ಯಂತ 8,000ಕ್ಕೂ ಹೆಚ್ಚು ಮರಗಳಿಗೆ ಜೀವ ತುಂಬಿದವರು. ಅಕ್ಷರಸ್ಥರಲ್ಲದಿದ್ದರೂ ಮಾಡಿದ ಪರಿಸರ ಸೇವೆ ವಿಶ್ವಮನಸ್ಸನ್ನು ಸೆಳೆದಿತ್ತು.

• ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳು: 

2019ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ನೀಡಿ ಅವರ ಸೇವೆಯನ್ನು ರಾಷ್ಟ್ರದ ಮಟ್ಟದಲ್ಲಿ ಗೌರವಿಸಿತ್ತು. 1995ರಲ್ಲಿ ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಜೊತೆಗೆ ವೃಕ್ಷಮಿತ್ರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ತಿಮ್ಮಕ್ಕನ ಹೆಸರಿನ ಮೇರುಗೆಯನ್ನು ಹೆಚ್ಚಿಸಿವೆ.
ಅಮೇರಿಕಾದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸರ ಶಿಕ್ಷಣ ಸಂಸ್ಥೆಯಾದ “ತಿಮ್ಮಕ್ಕ ರಿಸೋರ್ಸಸ್” ಅವರಿಗೆ ಅಪರೂಪದ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿದೆ.

ಕರ್ನಾಟಕ ಸರ್ಕಾರವು ಪರಿಸರ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ “ಪರಿಸರ ರಾಯಭಾರಿ” ಗೌರವ ನೀಡಿ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿತ್ತು.

• ರಾಜ್ಯದ ಗಣ್ಯರಿಂದ ಸಂತಾಪ:

ವೃಕ್ಷಮಾತೆಯ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಚಿವರಾದ ಪ್ರೀಯಾಂಕ್‌ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ  ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. “ಪರಿಸರ ಸಂರಕ್ಷಣೆಗೆ ಒಂದು ಯುಗವನ್ನು ದೀಪಿಸಿದ ತಿಮ್ಮಕ್ಕನವರು ಅಗಲಿಕೆ ತುಂಬಲಾರದ ನಷ್ಟ” ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.