POEM :”ಸಾಲು ಸಾಲು ಮರದ ನೆರಳಾಗಲು ಮತ್ತೆ ಹುಟ್ಟಿ ಬಾ……! ತಿಮ್ಮಕ್ಕ.!(“ವೃಕ್ಷವನದ ಕರುಳು” -ಕವನ ಸಮರ್ಪಣೆ)

By admin

                “ವೃಕ್ಷವನದ ಕರುಳು”

**ವೃಕ್ಷವನದ ಕರುಳು**
ಬೆವರ ….
ಹನಿಗಳ ಮಜ್ಜನದಿ
ಬೆಳೆದು ನಿಂತವು ಬೇವು ಮಾವು ಹೊಂಗೆ
ಸಾಲು ಸಾಲು ಮರದ ನೆರಳು ತಂಪನೆಯಲು
ಒಡಲು ಬಳ್ಳಿಯ ಬಾಹುಗಳಾಗಿ
ಅವಳನ್ನು ಅವು , ಅವುಗಳನ್ನು ಅವಳು
ಸಾಕಿ ಸಲುವಿದ ವೃಕ್ಷ ದೇವತೆ…….!

ಬದುಕನ್ನು ಸವಿಸಿ…..
ಬಿರುಬಿಸಿಲಿನಲ್ಲಿ ಹೊತ್ಹೊತಿಗೆ ತುತ್ತು ದಕ್ಕದೇ
ಬಾಳು ನೀಡಿದಳು ಮರ ಬಳ್ಳಿಗೆ
ಬಡತನದ ಬವಣೆಯ ತಲೆಯ ಮೇಲೆ ಕಾಲಿಟ್ಟು
ಕಷ್ಟದ ಮುಖಕ್ಕೆ ಉಗಿದುಗಿದು
ಸಸ್ಯ ಕಾಶಿಯನು ಕಣ್ಣು ತುಂಬಿಕೊಂಡಳು
ಮಗುವಿನಂತೆ ಮಗುವಾಗಿ ಹಸಿರಿನ ಸಿರಿಗೆ
ಜನ್ಮವಿತ್ತಳು……!

ತಿಮ್ಮಕ್ಕನ ……
ತಿಪ್ಪಲು ಯಾರಿಗೂ ಹೇಳದೆ
ವನದ ಜೊತೆ ಒಂದಿಷ್ಟು ಮಾತನಾಡಿಕೊಂಡೆ
ತಪ್ಪಲೊಳು ತಪ್ಪಲಾಗಿ ಮರಕೆ ಗೊಬ್ಬರವಾಗಲು
ಮಣ್ಣಿನೊಳಗೆ ಮಣ್ಣಾಗಿ ಮರೆಯಾದಳು
ಮನುಕುಲದ ಪಾಲಿಗೆ ಮರವಾದಳು……!

ಹುಟ್ಟೂರಿನಲ್ಲಿ…..
ಮನೆ ಇರದಿದ್ದರೆ ಏನಂತೆ
ಆಸ್ಪತ್ರೆಗೆ ಅಡಿಗಲ್ಲು ಹಾಕಿಸಿ ವರವಾದಳು
ಮರದ ಮಾತು ಅವಳೊಬ್ಬಳಿಗೆ ಗೊತ್ತು
ಸಾಲು ಮರ ಹಸಿರಾದಾಗ ಉಸಿರ ಚೆಲ್ಲಿದಳು
ತಲೆಯ ಮೇಲೆ ಹೊತ್ತು ನೀರುಣಿಸಿ
ತಲೆ ಸವರಿ ಸರಿದು ಹೋದಳು……!

ಗುಡಿಸಲ…..
ಗೋಡೆ ಮೇಲೆ ಪ್ರಶಸ್ತಿ ಫಲಕ ನಕ್ಕವು
ನೀನಿಲ್ಲದೆ ನಮ್ಮ ಪಾಡು
ನಿನಗೆ ನಾವು ಬೇಕಿಲ್ಲ ,ನಮಗೆ ನೀ ಬೇಕಿತ್ತು
ಗಡಿಯಾಚೆ ಬಾಹು ಚಾಚಿಕೊಂಡು
ಹಸಿರು ಬಾಚಿಕೊಂಡ ವೃಕ್ಷ ದೇವತೆ ನೀ
ಮರಗಳು ಉಳಿಯುತ್ತವೆ
ಮರಳಿ ನೀ ಬರುವರಿಗೂ… ಮತ್ತೆ ಬಾ
ಸಾಲು ಸಾಲು ಮರದ ನೆರಳಾಗಲು
ಹುಟ್ಟಿ ಬಾ……!

✍️ಡಾ. ಗೋವಿಂದರಾಜ ಆಲ್ದಾಳ