ಯಾಳಗಿ ಪಂಚಾಯತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಯುಗಾದಿ ಸಂಭ್ರಮದ ನಡುವೆ ಮನೆ ತೆರವು ಭೀತಿ!

ಸೆಕ್ಯುಲರ್ ವಾಯ್ಸ್ ನ್ಯೂಸ್ ಕೆಂಭಾವಿ
ಕೆಂಭಾವಿ ತಾಲೂಕಿನ ಯಾಳಗಿ ಗ್ರಾಮದಲ್ಲಿ ಯುಗಾದಿ ಹಬ್ಬದ ಸಿದ್ಧತೆಯ ನಡುವೆಯೇ ಬಡ ಕುಟುಂಬಗಳ ಮನೆಗಳನ್ನು ಅನಧಿಕೃತವಾಗಿ ತೆರವುಗೊಳಿಸಲು ಮುಂದಾಗಿರುವ ಪಂಚಾಯತಿ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಏನಿದು ಘಟನೆ?
ಯಾಳಗಿ ಗ್ರಾಮದ ವಾರ್ಡ್ ನಂ. 3ರ ಹೆಳವರ ಓಣಿ (ಶರಣ ಗುಡಿ ಏರಿಯಾ) ದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿದೆ. ನಿಯಮದಂತೆ 4 ಮೀಟರ್ (ಅಂದಾಜು 12 ಪೀಟ್) ಅಗಲದ ರಸ್ತೆ ನಿರ್ಮಿಸಬೇಕಿದೆ. ಆದರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹಾಗೂ ಸಿಬ್ಬಂದಿಗಳು ಯಾವುದೇ ಮುನ್ಸೂಚನೆ ನೀಡದೆ, ಜೆಸಿಬಿ ಮೂಲಕ ಸುಮಾರು 25 ಪೀಟ್ಗೂ ಅಧಿಕ ರಸ್ತೆ ಅಗೆದು ಅಕ್ರಮವಾಗಿ ಮನೆಗಳ ತೆರವಿಗೆ ಮುಂದಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಗ್ರಾಮಸ್ಥರ ಒತ್ತಾಯ:
ರಸ್ತೆ ಎಸ್ಟೀಮೇಟ್ ಎಷ್ಟಿದೆಯೋ ಅಷ್ಟು ಮಾತ್ರ ಕಾಮಗಾರಿ ನಡೆಸಲಿ. ವಿನಾಕಾರಣ ಬಡವರ ಮನೆಗಳನ್ನು ಒಕ್ಕಲೆಬ್ಬಿಸುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಾಳಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
