[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಶೋಕಿತ, ವ್ಯಾಕುಲಿತ, ಜೀವಹಂಗಿಲ್ಲದ ಸೀತೆI
ಕಂಡಳು ಶುಭ ಶಕುನಗಳ ಆಶಾ ಪ್ರಕಾಶ; II
ಮೀನಿನ ಸ್ಪರ್ಷಕ್ಕೆ ಕಮಲ ಹೊಯ್ದಾಡಿದಂತೆI
ಸೀತೆಯ ವಕ್ರ ಹುಬ್ಬಿನ ಎಡಗಣ್ಣು ಮಿಡಿಯಿತು; II
ಗಂಧಲೇಪನ, ಆಭರಣ ಭೂಷಣI
ಅಂದದ ಸೀತೆಯ ಎಡಗೈ ಬುಜ ಮಿಡಿಯಿತು; II
ಯುವ ಆನೆ ದಂತ ಅಂದದ ಸೀತೆ ತೊಡೆಗಳು,I
ಎಡತೊಡೆ ಮಿಡಿಯಿತು,ರಾಮ ಎದಿರು ಇದ್ದಂತೆ;II
ಮಾಸಿದ ಬಟ್ಟೆಯಲಿ ಸೀತೆಯ ನಿಷ್ಕಳಂಕ ಕಣ್ಣು,I
ಆಕರ್ಷಕ ಮೈಕಟ್ಟು, ಮಲ್ಲಿಗೆಮೊಗ್ಗಗಳಂತಹ ಹಲ್ಲು, II
ಮಣ್ಣು-ಧೂಳ ಮೆತ್ತದ ಸುವರ್ಣ ಮೈಬಣ್ಣ ಹೊಳೆದವುI
ಲವಲವಿಕೆಯಿಂದ ಶುಭದಿ; ಕಂಡು ಶುಭ ಶಕುನಗಳನ್ನು II
ಅರಳಿದಳು ಬಾಡಿದ ಮುಖದ ಸೀತೆ ಗಾಳಿ ಬಿಸಿಲಿಗೆ ಬಾಡಿದ I
ಸಸಿ ಚಿಗುರಿದಂತೆ ಮಳೆಗೆ; ಸುಂದರ ಕಣ್ಣು, II
ಬಾಗಿದ ಹುಬ್ಬ, ಆಕರ್ಷಕ ದಂತಗಳು ಬಿಂಬ ದಂತಹ ತುಟಿಗಳ ಸೀತೆI
ಕಂಡಳು ಗ್ರಹಣ ಬಿಟ್ಟ ಚಂದ್ರನಂತೆ; II
ಮಾನಸಿಕ ಕ್ಷೋಭೆ ದೂರಾಯಿತು,ಉಲ್ಲಾಸಿತಳಾದಳುI
ಸೀತೆ,ಕಂಗೊಳಿಸಿದಳು ಹುಣ್ಣಮೆ ಚಂದ್ರನಂತೆ.II
ಸುಂದರ ಕಾಂಡ
ಸೀತೆಗೆ ಶುಭ ಶಕುನ ಕಂಡು ಬಂದಾಗ ಅದರ ಹರುಷವು ಸೀತೆಯ ಅಂಗಾಂಶಗಳಲ್ಲಿ ಸಂಚರಿಸಿದ ಅಂದವನ್ನು ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ಹೀಗೆ ವಿವರಿಸಿರುವರು ” ಶೋಕಿತ, ವ್ಯಾಕುಲಿತ, ಜೀವಹಂಗು ತೊರೆದ, ಆತ್ಮಹತ್ಯೆಗೆ ಸಿದ್ಧಳಾದ ಸೀತೆಯು ಶುಭ ಶಕುನಗಳ ಮೂಲಕ ಹೊಸ ಆಶಾ ಪ್ರಕಾಶ ಕಂಡಳು: ಮೀನಿನ ಸ್ಪರ್ಷಕ್ಕೆ ಕಮಲ ಹೊಯ್ದಾಡಿದಂತೆ ಸೀತೆಯ ವಕ್ರ ಹುಬ್ಬಿನ ಎಡಗಣ್ಣು ಮಿಡಿಯಿತು, ಗಂಧಲೇಪಿತ, ಆಭರಣ ಭೂಷಿತ ಅಂದದ ಸೀತೆಯ ಎಡಗೈ ಬುಜ ಮಿಡಿಯಿತು, ಯುವ ಆನೆಯ ದಂತ ಅಂದದ ಸೀತೆ ತೊಡೆಗಳಲ್ಲಿ ಎಡತೊಡೆ ಮಿಡಿಯಿತು,ರಾಮ ಎದಿರು ಇದ್ದಂತೆ ಭಾಸವಾಗಿ ; ಮಾಸಿದ ಬಟ್ಟೆಯಲಿಯ ಸೀತೆಯ ನಿಷ್ಕಳಂಕ ಕಣ್ಣು, ಆಕರ್ಷಕ ಮೈಕಟ್ಟು, ಮಲ್ಲಿಗೆಮೊಗ್ಗಗಳಂತಹ ಹಲ್ಲುಗಳು, ಮಣ್ಣು-ಧೂಳ ಮೆತ್ತದ ಸುವರ್ಣ ಮೈಬಣ್ಣ ತಕ್ಷಣ ಶುಭಸೂಚಕವಾಗಿ ಲವಲವಿಕೆಯಿಂದ ಹೊಳೆದವು ಅರ್ಥಾತ್ ಸೀತೆಯ ಮೈಯಲ್ಲಿ ಚೈತನ್ಯ ತುಂಬಿತು; ಶುಭ ಶಕುನಗಳನ್ನು ಕಂಡ ಸೀತೆಯ ಬಾಡಿದ ಮುಖದ ಅರಳಿತು ಗಾಳಿ ಬಿಸಿಲಿಗೆ ಬಾಡಿದ ಸಸಿ ಚಿಗುರಿದಂತೆ ಮಳೆಗೆ; ಸುಂದರ ಕಣ್ಣು, ಬಾಗಿದ ಹುಬ್ಬ, ಆಕರ್ಷಕ ದಂತಗಳು, ಬಿಂಬಫಲದಂತಹ (ತೊಂಡೆಕಾಯಿಗಳಂತಹ) ತುಟಿಗಳ ಸೀತೆಯು ಗ್ರಹಣ ಬಿಟ್ಟ ಚಂದ್ರನಂತೆ ಕಂಡಳ: ಶಭ ಶಕುನ ಕಂಡ ಸೀತೆಯ ಮಾನಸಿಕ ಕ್ಷೋಭೆ ದೂರಾಯಿತು,ಉಲ್ಲಾಸಿತಳಾಗಿ ಸೀತೆಯು ಹುಣ್ಣಮೆ ಚಂದ್ರನಂತೆ ಕಂಗೊಳಿಸಿದಳು”. ನಿರಾಶೆಯಿಂದ ಸೀತೆಯು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಂಡ ಸಂಧರ್ಭದಲ್ಲಿ ಅವಳ ಎಡಕಣ್ಣು, ಎಡಗೈಭುಜ ಮತ್ತು ಎಡತೊಡೆ ನಾಡಿಗಳು ಸಿಡಿದಿದ್ದರಿಂದ ಅದು ಅವಳಿಗೆ ಶುಭ ಸೂಚಕ ಶಕುನವಾಗಿದ್ದರಿಂದ ಅವಳ ದೇಹದಲ್ಲಿ ಜೈತನ್ಯ ಮೂಡಿತು ಮತ್ತು ಅವಳಿಗೆ ರಾಮನು ತನ್ನ ಬಿಡುಗಡೆಗೆ ಬರುವ ಹೊಸ ಲಕ್ಷಣಗಳು ಗೋಚರಿಸಿದವು ತದ್ಮೂಲಕ ಆದಿಕವಿ ವಾಲ್ಮೀಕಿಯು ‘ಶಕುನ’ದ ಬಗ್ಗೆ ಇದ್ದ ಜನಪದರ ಸಾಮಾಜಿಕ ಮನೋಶಾಸ್ತ್ರಸ್ಥಿತಿಯನ್ನು ವಿವರಿಸಿರುವರು, ಅದು ಸಮಾಜದ ಸಬಲ ನಂಬಿಕೆಯಾಗಿದ್ದು ಇಂದಿಗೂ ಕಂಡು ಬರುವದು. ಆದಿಕವಿ ವಾಲ್ಮೀಕಿಯ ಅಲಂಕರಯುಕ್ತ ಕಾವ್ಯ ರಚನೆ ಶೈಲಿ ಅದ್ವಿತೀಯ, ಅದ್ಭುತ. ನಂತರದ ಆವೃತ್ತಿ ಯಲ್ಲಿ ಕವಿಗಳು ಮಾಡಿದ ಪ್ರಯತ್ನ ಗಳು ಆದಿಕವಿ ವಾಲ್ಮೀಕಿಯ ಮಟ್ಟ ತಲುಪುವಲ್ಲಿ ವಿಫಲಗೊಂಡಿವೆ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
