
ಕೇಳಿದ ವೀರ ಹನುಮ, ತ್ರಿಜಟಾ, ಸೀತೆಯ ಮಾತು,I
ರಾಕ್ಷಸಿಯರ ಬೆದರಿಕೆ ಮಾತು; II
ಕಂಡು ಸೀತೆಯನು ಸ್ವರ್ಗದ ದೇವತೆಯಂತೆI
ಹರಿ ಬಿಟ್ಟನು ತನ್ನ ಯೋಚನೆಗಳನು ಹನುಮ: II
“ಎಲ್ಲ ದಿಸೆಗಳಲ್ಲಿ ಯಾವ ಸೀತೆಯನು ಸಹಸ್ರ ಸಹಸ್ರಕೋಟಿI
ವಾನರರು ಹುಡುಕುತ್ತಿಹರೋ, ಆ ಸೀತೆಯನು ನಾ ಕಂಡೆ, II
ಗುಪ್ತಚರನಾಗಿ ಎನ್ನ ಕಳಿಸಿದ ಒಡೆಯನಿಗೆI
ತಿಳಿಸಬೇಕು ಶತ್ರುಬಲ ಮಾಹಿತಿ, ತಿಳಿದು;II
ರಾಕ್ಷಸರ ನಡತೆ, ನಗರ ವ ರಾವಣನ ಬಲI
ತಿಳಿದುಕೊಳ್ಳಬೇಕು ಎಲ್ಲ ರಹಸ್ಯಗಳನು ನಾ, II
ಅಪ್ರಥಿಮ ತಾಳ್ಮೆಯ, ಪತಿ ನಿರೀಕ್ಷೆಯಲ್ಲಿದ್ದI
ಸೀತೆಯನು ಸಮಾಧಾನ ಪಡೆಸಬೇಕು ಮೊದಲು, II
ದೋಷಿಯಾಗುವೆ ಸಮಾಧಾನ ಪಡಿಸದೇ ದುಃಖಿತI
ಸೀತೆಯನು ನಾ ಹಾಗೆ ಮರಳಿದಲ್ಲಿ, II
ರಕ್ಷಣೆಯಿಲ್ಲದ ಸೀತೆ ಪ್ರಾಣ ತ್ಯಾಗ ಮಾಡ್ಯಾಳುI
ಮರಳಿದ ನಂತರ ನಾ ಕಿಷ್ಕಿಂಧಕ್ಕೆ, II
ಸೀತೆ ಕಾಣುವ ಆತುರತೆಯ ರಾಮನI
ಸಮಾಧಾನ ಮಾಡವ ಯೋಗ್ಯತೆ ಬರಬೇಕು ಎನಗೆ, II
ಸರಿ ಅಲ್ಲ, ರಾಕ್ಷಸಿಯರ ಮುಂದೆ ಮಾತಾಡಿಸುವದು ಸೀತೆಯನು,I
ಹೇಗೆ ಮಾತನಾಡಿಸುವದು? ಗೊಂದಕ್ಕಿಡಾಗುವೆ ನಾ,II
ಸೀತೆಗೆ ಬಂದ ವಿಷಯ ತಿಳಿಸದಿದ್ದರೆ, ಈ ರಾತ್ರಿಯಲಿ ನಿಸ್ಸಂದೇಹ,I
ಹೇಗೊ ಮಾಡಿ ಪ್ರಾಣ ತ್ಯಾಗ ಮಾಡ್ಯಾಳು ಸೀತೆ; II
ಸೀತೆಯೊಂದಿಗೆ ಮಾತಾಡದಿದ್ದದ್ರೆ, ಸೀತೆ ಏನು ಹೇಳಿದಳೆಂದುI
ರಾಮ ಪ್ರಶ್ನಿಸಿದರೆ, ಉತ್ತರಿಸಲಿ ರಾಮನಿಗೆ ಏನೆಂದು? II
ಸೀತೆಯ ಸಂದೇಶವನ್ನು ಒಯ್ಯದಿದ್ದರೆI
ಖಂಡಿತ ಉಗ್ರಗಣ್ಣಿನ ರಾಮ ಎನ್ನ ಭಸ್ಮ ಮಾಡ್ಯಾನು, II
ಸುಗ್ರೀವನಿಗೆ ಸೈನ್ಯದೊಂದಿಗೆ ಬರಲು ಇಲ್ಲಿಗೆI
ಪ್ರಚೋದಿಸಿದರೂ ನಾ, ಅದು ನಿರುಪುಯುಕ್ತ; II
ಇದ್ದುಕೊಂಡು ಇಲ್ಲಿಯೇ ರಾಕ್ಷಸಿಯರ ಮಧ್ಯೆ,I
ಬಂದ ವಿಷಯ ತಿಳಿಸುವೆ ದುಃಖಿತ ಸೀತೆಗೆ; II
ವಾನರ ನಾನು, ಸೀತೆ ಭಾಷೆ ಅರಿಯದವ,I
ಮಾನವ ಭಾಷೆಯಲಿ ಆಡುವದ್ಹೇಗೆ?; II
ಸಂಸ್ಕೃತ ಭಾಷೆಯಲಿ ಮಾತನಾಡಿದರೆI
ಕೇಳಿ ಹೆದರ್ಯಾಳು ಸೀತೆ ರಾವಣನೆಂದು; II
ಮಾನವ ಭಾಷೆಯಲ್ಲಿಯೇ ಮಾತಾಡಿಸಿದರೆ I
ಮಾತ್ರ, ಪಡಬಹುದು ಸಮಾಧಾನ ಸೀತೆ;II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಸೀತೆಯನು ಕಂಡು ಅವಳನ್ನು ಹೇಗೆ ಮಾತನಾಡಿಸಬೆಕೆಂಬ ಹನುಮಾನನ ದ್ವಂದ್ವಸ್ಥಿತಿಯನ್ನು ವಿವರಿಸುತ್ತ ಕೆಲವು ಚಿಂತನ ಚುಲುಮೆಗಳನ್ನು ಪುಟಿಸಿರುವರು: (1) ಗುಪ್ತಚಾರನ ಪ್ರಜ್ಞೆ: ಗುಪ್ತಚಾರನು ಸ್ಥಿತಿಗತಿಯ ಪ್ರಜ್ಞೆಯುಳ್ಳವನಾಗಿರಬೇಕು ಎಂಬ ತತ್ವವನ್ನು ಆದಿಕವಿ ಹನುಮಾನನ ನುಡಿಗಳಲ್ಲಿ ಹೀಗೆ ಬಿಂಬಿಸಿರುವರು “ಆ ಸೀತೆಯನು ನಾನು ಇಲ್ಲಿ ಕಂಡೆನು, ಗುಪ್ತಚರನಾಗಿ ನನ್ನನು ಕಳಿಸಿದ ಒಡೆಯನಿಗೆ ನಾನು ಶತ್ರುಬಲ ಮಾಹಿತಿ ತಿಳಿದು ತಿಳಿಸಬೇಕು: ನಾನು ರಾಕ್ಷಸರ ನಡತೆ, ಲಂಕಾನಗರ ಮತ್ತು ರಾವಣನ ಬಲ, ಎಲ್ಲ ರಹಸ್ಯಗಳನು ತಿಳಿದುಕೊಳ್ಳಬೇಕು”. (2) ಕಾರ್ಯ ಈಡರಿಕೆಯ ಚಾಣಾಕ್ಷತೆ: ಗುಪ್ತಚಾರನಲ್ಲಿ ಬಂದ ಕಾರ್ಯ ಈಡರಿಸಿಕೊಳ್ಳುವ ಚಾಣಾಕ್ಷತೆಯನ್ನು ಆದಿಕವಿ ವಾಲ್ಮೀಕಿಯು ಹನುಮಾನನ ನಿಪುಣ ಶಬ್ದಗಳಲ್ಲಿ ಹೀಗೆ ತಿಳಿಸಿರುವರು “ ಮೊದಲು ಅಪ್ರಥಿಮ ತಾಳ್ಮೆಯ, ಪತಿ ನಿರೀಕ್ಷೆಯಲ್ಲಿದ್ದ ಸೀತೆಯನು ಸಮಾಧಾನ ಪಡೆಸಬೇಕು, ದುಃಖಿತ ಸೀತೆಯನು ಸಮಾಧಾನ ಪಡಿಸದೇ ಹಾಗೆ ಮರಳಿದಲ್ಲಿ ನಾನು ದೋಷಿಯೆನಿಸಿಕೊಳ್ಳವೆ, ಒಂದುವೇಳೆ ನಾನು ಅವಳಿಗೆ ಭೇಟಿಯಾಗದೇ ಹೋದರೆ ನಾನು ಕಿಷ್ಕಿಂದಕ್ಕೆ ಮರಳಿದ ನಂತರ ಅವಳು ರಕ್ಷಣೆಯಿಲ್ಲದ ತನ್ನ ಪ್ರಾಣ ತ್ಯಾಗ ಮಾಡಬಹುದು; ನನ್ನಲಿ ಸೀತೆಯನು ಕಾಣುವ ಆತುರತೆಯ, ರಾಮನನ್ನು ಸಮಾಧಾನ ಮಾಡವ ಯೊಗ್ಯತೆ ಬರಬೇಕು,… ರಾಕ್ಷಸಿಯರ ಮುಂದೆ ಸೀತೆಯನು ಮಾತಾಡಿಸುವದು ಸರಿ ಅಲ್ಲ ಹಾಗಾದರೆ ನಾನು ಸೀತೆಯನ್ನು ಹೇಗೆ ಮಾತನಾಡಿಸಬೇಕೆಂಬ ಗೊಂದಕ್ಕಿಡಾಗುವೆ; ಒಂದು ವೇಳೆ ನಾನು ರಾಮನಧೂತನಾಗಿ ಬಂದ ವಿಷಯ ಸೀತೆಗೆ ತಿಳಿಸದಿದ್ದರೆ ಈ ರಾತ್ರಿಯಲಿಯೇ, ನಿಸ್ಸಂದೇಹ, ಅವಳು ಹೇಗೊ ಮಾಡಿ ಪ್ರಾಣ ತ್ಯಾಗ ಮಾಡಬಹುದು; ಸೀತೆಯನ್ನು ಮಾತಾನಾಡಿಸದೇ ನಾನು ಮರಳಿ ಕಿಷ್ಕಿಂದಕ್ಕೆ ಹೋದರೆ ಸೀತೆ ಏನು ಹೇಳಿದಳೆಂದು ರಾಮ ಪ್ರಶ್ನಿಸಿದರೆ ನನಗೆ ರಾಮನಿಗೆ ಉತ್ತರಿಸಲು ಸಾಧ್ಯವಿಲ್ಲ, ಸೀತೆಯ ಸಂದೇಶವನ್ನು ನಾನು ಒಯ್ಯದಿದ್ದರೆ ಖಂಡಿತ ಉಗ್ರಗಣ್ಣಿನ ರಾಮನು ನನ್ನನು ಭಸ್ಮ ಮಾಡಬಹುದು,….ಇಲ್ಲಿಯೇ ರಾಕ್ಷಸಿಯರ ಮಧ್ಯೆ ಇದ್ದುಕೊಂಡು ನಾನು ಬಂದ ವಿಷಯ ದುಃಖಿತ ಸೀತೆಗೆ ತಿಳಿಸುವೆನು”.(3) ತ್ರೇತಾಯುಗದ ಭಾಷೆಗಳ ಜಿಜ್ಞಾಸೆ: ತ್ರೇತಾಯುಗದಲ್ಲಿ ಒಂದಕ್ಕಿಂತ ಹೆಚ್ಚ ಬಾಷೆಗಳನ್ನಾಡುವ ಉಲ್ಲೇಖಗಳನ್ನು ಆದಿಕವಿಯು ಹನುಮಾನನ ಮೂಲಕ ಹೀಗೆ ವ್ಯಕ್ತಪಡಿಸಿರುವರು “ ನಾನು ವಾನರ, ಸೀತೆಯ ಭಾಷೆಯನ್ನು ಅರಿಯದವನು, ನಾನು ಮಾನವರ ಭಾಷೆಯನು ಹೇಗೆ ಆಡಬೇಕು? ನಾನು ಸಂಸ್ಕೃತ ಭಾಷೆಯಲಿ ಸೀತೆಯನ್ನು ಮಾತನಾಡಿಸಿದರೆ ಅದನ್ನು ಕೇಳಿ ಅವಳು ನಾನು ಬಹುರೂಪಿ ರಾವಣನೆಂದು ತಿಳಿದು ಹೆದರಬಹುದು ಕಾರಣ ನಾನು ಮಾನವ ಭಾಷೆಯಲ್ಲಿಯೇ ಅವಳನ್ನು ಮಾತಾಡಿಸಿದರೆ ಮಾತ್ರ ಅವಳು ಸಮಾಧಾನ ಪಡಬಹುದು”, ಇಲ್ಲಿ ವಾನರ-ಭಾಷೆ, ಮಾನವರ-ಭಾಷೆ ಮತ್ತು ದೇವತೆ/ಪಂಡಿತರಾಡುವ ಸಂಸ್ಕೃತ-ಭಾಷೆ ಹೀಗೆ ಮೂರು ಭಾಷೆಗಳ ಉಲ್ಲೇಖವಿದೆ. ಒಟ್ಟಿನಲ್ಲಿ ಸೀತೆ ಯನು ಕಂಡ ಹನುಮಾನ ಗೊಂದಲವನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
