ಬಂದಳ್ಳಿ ಗ್ರಾಪಂ ಉಪಾಧ್ಯಕ್ಷೆ ಸದಸ್ಯತ್ವ ಅನರ್ಹ

By admin

ಯಾದಗಿರಿ:ತಾಲೂಕಿನ ಬಂದಳ್ಳಿ ಗ್ರಾಪಂನಲ್ಲಿ ಸರಕಾರದ ವಿವಿಧ ಯೋಜನೆಯಡಿ ನಕಲಿ ಬಿಲ್ ಸೃಷ್ಠಿಸಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಂಚಾಯಿತಿ ಹಾಲಿ ಉಪಾಧ್ಯಕ್ಷೆ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಅವರನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ 2020ರಲ್ಲಿ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಬಂದಳ್ಳಿ ಗ್ರಾಪಂ ಅಧ್ಯಕ್ಷರಾಗಿದ್ದ ವೇಳೆ 14ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯುವ ನೀರು, ಮೋಟಾರು ದುರಸ್ಥಿ, ವಿವಿಧ ಸಾಮಾಗ್ರಿ ಕೈಪಂಪ್, ಮಾಸ್ಕ್, ಸ್ಯಾನಿಟೈಸರ್, ಸೋಲಾರ್ ಖರೀದಿ ವಿಕಲಚೇತನ ಉಪಕರಣ ಮತ್ತು ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ 22.34 ಲಕ್ಷ ರೂ.ಗಳ ಕ್ರಿಯಾ ಯೋಜನೆ ನಿಗದಿಪಡಿಸಲಾಗಿತ್ತು.

ಈ ಮೊತ್ತದಲ್ಲಿ ಯಾವುದೇ ಸಾಮಾಗ್ರಿ ಖರೀದಿಸದೆ ಹಣ ಡ್ರಾ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಠಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಒಟ್ಟಾರೆ ಅಧ್ಯಕ್ಷರು ಹಾಗೂ ಪಿಡಿಒ ಒಟ್ಟು 27.22 ಲಕ್ಷ ರೂ.ಅನುದಾನ ದುರಪಯೋಗ ಪಡಿಸಿಕೊಂಡು ಅವ್ಯವಹಾರ ಎಸಗಿದ್ದಾರೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯದರ್ಶಿ ಪರಶುರಾಮ್ ಚವ್ಹಾಣ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

ಅದರಂತೆ ಜಿಪಂ ಸಿಇಒ ತನಿಖಾ ತಂಡ ರಚನೆ ಮಾಡಿ, ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ಸಮಗ್ರ ವರದಿ ತರಿಸಿಕೊಂಡು ಪ್ರಾದೇಶಿಕ ಆಯುಕ್ತರ ಮೂಲಕ ಸರಕಾರಕ್ಕೆ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇದೊಂದು ಗಂಭೀರ ಅವ್ಯವಹಾರ ಎಂದು ಪರಿಗಣಿಸಿದೆ. ಉಪಾಧ್ಯಕ್ಷೆಯಾಗಿರುವ ಅನುರಾಧ ಯಡ್ಡಳ್ಳಿರನ್ನು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಅನ್ವಯ ಸದಸ್ಯತ್ವದಿಂದ ಅನರ್ಹಗೊಳಿಸಿ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧೆಸದಂತೆ ಕಳೆದ ನ.23ರಂದು ಅದೇಶಿಸಿದೆ.
ಅಲ್ಲದೆ, ತಪ್ಪಿತಸ್ಥರಿಂದ ದುರ್ಬಳಕೆ ಮಾಡಿಕೊಳ್ಳಲಾದ ಹಣ ವಸೂಲಿ ಮಾಡುವಂತೆ ಯಾದಗಿರಿ ತಾಪಂ ಇಒಗೆ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.

ಬಂದಳ್ಳಿ ಗ್ರಾಪಂನಲ್ಲಿ ವಿವಿಧ ಯೋಜನೆಗಳಡಿ ದುರ್ಬಳಕೆ ಮಾಡಿಕೊಂಡ ಹಣವನ್ನು ವಸೂಲಿ ಮಾಡಲು ತಾಪಂ ಇಒಗೆ ನಿರ್ದೇಶನ ನೀಡಲಾಗಿದೆ.