ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ದೊಡ್ಡಮನಿ

By admin

ಶಹಾಪುರ:ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ರಾಷ್ಟ್ರದ ವಿವಿಧ ಕ್ಷೇತ್ರದಲ್ಲಿಯ ವಿಜ್ಞಾನ, ತಂತ್ರಜ್ಞಾನ ಹಾಗೂ ನೈಪುಣ್ಯತೆಯ ಕೊಡುಗೆ ಶಿಕ್ಷಕರದೇ ಆಗಿದೆ. ಶಿಕ್ಷಕರು ಸಮಾಜ ಪರಿವರ್ತನೆ ಹಾಗೂ ನವರಾಷ್ಟ್ರ ನಿರ್ಮಾಣದ ರೂವಾರಿಗಳಾಗಿದ್ದಾರೆ ಎಂದು ಎನ್ಎಸ್ಎಸ್ ವಿಭಾಗೀಯ ಅಧಿಕಾರಿಗಳಾದ ಡಾ. ಚಂದ್ರಶೇಖರ್ ದೊಡ್ಡಮನಿ ಹೇಳಿದರು.

ಶಹಪುರ ತಾಲೂಕಿನ ಭೀಮರಾಯನಗುಡಿಯಲ್ಲಿ ಕೆಂಭಾವಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಶಕುಂತಲಾ ಮನೋಹರ ಹಡಗಲಿ ಅವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸರಕಾರಿ ಸೇವೆಯಲ್ಲಿ 60 ವರ್ಷಕ್ಕೆ ವಯೋನಿವೃತ್ತಿ ಹೊಂದಿದರೂ ಬದುಕನ್ನು ಮರಳಿ ಅರಳಿಸಿಕೊಂಡು ಸಮಾಜಕ್ಕೆ ದಿಕ್ಸೂಚಿಯಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ ಮಾತನಾಡಿ, ಶಕುಂತಲಾ ಎಂ ಹಡಗಲಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯನ್ನು ಶ್ಲಾಘಿಸಿದರು

. ಯಾದಗಿರಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ್ ಸೇವಾ ನಿವೃತ್ತರಾದ ಶಕುಂತಲಾ ಎಂ ಹಡಗಲಿ ಅವರ ಸಾರ್ಥಕ ಬದುಕು ಮತ್ತು ಸಮರ್ಥ ಆಡಳಿತ ಸೇವೆಯನ್ನು ಕೊಂಡಾಡಿದರು.

ರಾಜಶೇಖರ ಗಣಾಚಾರಿ, ಡಾ. ನೀಲಕಂಠ ಬಡಿಗೇರ್, ಸೈದಾಬಿ ಮತ್ತು ಚನ್ನಪ್ಪ ಆನೆಗುಂದಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಬಿಜೆಎನ್ಎಲ್ ರೆಜಿಸ್ಟರರ್ ನಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಡಾ. ಚಂದ್ರಶೇಖರ್ ಸುಭೇದಾರ್, ಮಲ್ಲಿಕಾರ್ಜುನ್ ಎಂ. ಎಸ್, ಡಾ.ನಾಗರತ್ನ, ಮಹಾಲಿಂಗ, ಶಂಕರ್ ರೆಡ್ಡಿ, ಎಂ ಎಸ್. ಸಜ್ಜನ್, ದೇವಿಂದ್ರಪ್ಪ ಎಂ, ಸಿದ್ರಾಮಪ್ಪ ಅನವಾರ, ದೌಲಸಾಬ್ ನದಾಫ್ ಹಾಗೂ ಎನ್ ಸಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.