ತಾಲೂಕಿನ ಬಸಾಪುರ (ಗಿಣಿಗೇರಿ) ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಕುರಿಗಾಹಿ ಮಾರುತಿ ಹೊಸಮನಿ ಅವರಿಗೆ ಸೇರಿದ 9 ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿವೆ.
ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಎಂಎಸ್ಪಿಎಲ್ ಪಕ್ಕದಲ್ಲಿರುವ ಶಿವಯ್ಯ ಕೋಳಿ ಫಾರಂ ಹತ್ತಿರ ಈ ಘಟನೆ ನಡೆದಿದೆ. ಮಳೆ-ಗುಡುಗು ಸಹಿತ ವಾತಾವರಣದ ನಡುವೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಇದಲ್ಲದೆ, ಕೆಲವು ಕುರಿಗಳು ಅಸ್ವಸ್ಥಗೊಂಡಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪಶುವೈದ್ಯರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಕುರಿಗಾಹಿಗೆ ದೊಡ್ಡ ಆರ್ಥಿಕ ನಷ್ಟವನ್ನುಂಟುಮಾಡಿದ್ದು, ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.